ಬೀಜಿಂಗ್: ಭಾರತದಿಂದಲೇ ನನ್ನ ಉತ್ತರಾಧಿಕಾರಿಯ ಆಗಮನವಾಗಬಹುದು ಎಂಬ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮ ಅವರ ಹೇಳಿಕೆಗೆ ಚೀನಾ ಪರೀಕ್ಷವಾಗಿ ಪ್ರತಿಕ್ರಿಯೆ ನೀಡಿದೆ.
ದಲೈಲಾಮ ಉತ್ತರಾಧಿಕಾರಿಯೇನಾದರೂ ಭಾರತೀಯ ಮೂಲದವರಾಗಿದ್ದರೆ ಅವರನ್ನು ಅಂಗೀಕರಿಸುವುದಿಲ್ಲ ಎಂಬ ಸುಳಿವನ್ನು ಚೀನಾ ನೀಡಿದೆ.
ಟಿಬೆಟ್ ನ 14 ನೇ ಧರ್ಮಗುರು ದಲೈ ಲಾಮ, 1959 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಚೀನಾ ಅವರನ್ನು ಅತ್ಯಂತ ಅಪಾಯಕಾರಿ ಪ್ರತ್ಯೇಕತಾವಾದಿ ಎಂದೇ ಪರಿಗಣಿಸುತ್ತಿದ್ದು, ದಲೈ ಲಾಮ ಉತ್ತರಾಧಿಕಾರಿ ಬಗ್ಗೆ ಈಗ ತಲೆಕೆಡಿಸಿಕೊಂಡಿದೆ.
ರಾಯಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದಲೈಲಾಮ ತಮ್ಮ ಉತ್ತರಾಧಿಕಾರಿ ಬಗ್ಗೆ ಮಾತನಾಡಿದ್ದರು. ಚೀನಾ ಸಧ್ಯದ ಪರಿಸ್ಥಿತಿಯಲ್ಲಿ ನನಗಿಂತ ನನ್ನ ಉತ್ತರಾಧಿಕಾರಿಯ ಬಗ್ಗೆಯೇ ಹೆಚ್ಚು ಆತಂಕಗೊಂಡಿದೆ. ನನ್ನ ಉತ್ತರಾಧಿಕಾರಿ ಭಾರತದಿಂದಲೂ ಆಗಮಿಸಬಹುದು ಅಂತಹ ಸಂದರ್ಭದಲ್ಲಿ ಚೀನಾ ಸಹ ಓರ್ವ ದಲೈ ಲಾಮಾನನ್ನು ನೇಮಕ ಮಾಡುತ್ತದೆ. ಚೀನಾದಿಂದ ಆಯ್ಕೆಯಾದ ದಲೈಲಾಮನನ್ನು ಯಾರೂ ನಂಬುವುದಿಲ್ಲ ಎಂದು ದಲೈಲಾಮ ಹೇಳಿದ್ದರು.
ಚೀನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಲೈಲಾಮ ಅವರ ಅವತಾರ ಚೀನಾದ ಕಾನೂನು, ನಿಯಂತ್ರಣ ಹಾಗೂ ಧಾರ್ಮಿಕ ವಿಧಾನಗಳನ್ನು ಅನುಸರಿಸಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಮೂಲಕ ಭಾರತದಿಂದ ಆಯ್ಕೆಯಾಗುವ ದಲೈಲಾಮಾ ಅವರನ್ನು ತಾನು ಅಂಗೀಕರಿಸುವುದಿಲ್ಲ ಎಂಬ ಸುಳಿವು ನೀಡಿದೆ.