ಪ್ರಧಾನಿ ಮೋದಿ ಭಾಷಣದ ವಿವರ:
'ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 300 ಕಿ.ಮೀ ದೂರ (ಎಲ್ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ. ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ'.
'ಆ್ಯಂಟಿ ಸೆಟಲೈಟ್- (ಎ ಸ್ಯಾಟ್) ಕ್ಷಿಪಣಿಯ ಯಶಸ್ದೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಈ ಸಾಧನೆ ಮಾಡಿದ ಡಿಆರ್ಡಿಓ ವಿಜ್ಞಾನಿಗಳಿಗೆ ಅಭಿನಂದನೆಗಳು. ದೇಶದ ಹೆಮ್ಮೆ, ಪ್ರತಿಷ್ಠೆ ಹೆಚ್ಚಿಸಿದ ವಿಜ್ಞಾನಿಗಳಿಗೆ ಅಭಿನಂದನೆಗಳು' ಎಂದು ಪ್ರಧಾನಿ ಮೋದಿ ಹೇಳಿದರು.
ಅಂತೆಯೇ 'ಈ ಸಾಧನೆ ಬೇರೆ ಯಾವುದೇ ದೇಶದ ವಿರುದ್ಧವಲ್ಲ, ಬದಲಿಗೆ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ನಡೆಸಿದ ಈ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ಅಥವಾ ಒಪ್ಪಂದಗಳ ಉಲ್ಲಂಘನೆಯಾಗಿಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.