ಅಮರಾವತಿ: ಆಂಧ್ರಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವೈಎಸ್ ಜಗನ್ ಮೋಹನ್ ಆಂಧ್ರ ಪ್ರದೇಶದ ಡಿಜಿಪಿ ಹುದ್ದೆಯಲ್ಲಿದ್ದ ಅಧಿಕಾರಿಯನ್ನು ಬದಲಾವಣೆ ಮಾಡಿದ್ದಾರೆ.
ವೈಎಸ್ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗುವುದು ಖಾತ್ರಿಯಾಗುತ್ತಿದ್ದಂತೆಯೇ ಡಿಜಿಪಿಯಾಗಿದ್ದ ಆರ್ ಪಿ ಠಾಕೂರ್ ಅವರ ಬದಲಾವಣೆಯನ್ನೂ ನಿರೀಕ್ಷೆ ಮಾಡಲಾಗಿತ್ತು.
ಭ್ರಷ್ಟಾಚಾರ ನಿಗ್ರಹ ದಳದ ಡಿಜಿಯಾಗಿರುವ ಎಬಿ ವೆಂಕಟೇಶ್ವರ್ ರಾವ್ (1989 ರ ಬ್ಯಾಚ್) ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ.
ಗೌತಮ್ ಸಾವಂಗ್ ಆಂಧ್ರ ಹೊಸ ಡಿಜಿಪಿ
ಗೌತಮ್ ಡಿ ಸಾವಂಗ್ ಅವರನ್ನು ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ಎಲ್ ವಿ ಸುಬ್ರಮಣ್ಯಂ ಅವರು ಹೊಸ ಡಿಜಿಪಿ ನೇಮಕಾತಿ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಡಿಜಿಪಿ ಆರ್.ಪಿ. ಠಾಕೂರ್ ಅವರನ್ನು ಮುದ್ರಣ ಮತ್ತು ಸ್ಟೇಷನರಿ ಇಲಾಖೆಯ ಡಿಜಿ ಆಗಿ ನೇಮಿಸಿ ವರ್ಗಾಯಿಸಲಾಗಿದೆ. ಹೊಸದಾಗಿ ನೇಮಕಗೊಂಡ ಡಿಜಿಪಿ ಸಾವಂಗ್ ಅವರು ಇಂದು ಮುಖ್ಯಮಂತ್ರಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.