ಅಜಿತ್ ಪವಾರ್ ಮಹಾರಾಷ್ಟ್ರ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ: ಸಂಜಯ್ ರಾವತ್
ನವದೆಹಲಿ: ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಅಚ್ಚರಿಯ ರಾಜಕೀಯ ಬೆಳವಣಿಗೆ ಕಂಡು ಎನ್ ಸಿಪಿ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಈ ಮೂಲಕ ಶತಾಯಗತಾಯ ಸರ್ಕಾರ ರಚಿಸಿ ಸಿಎಂ ಆಗಬೇಕೆಂದು ಕನಸು ಕಾಣುತ್ತಿದ್ದ ಶಿವಸೇನೆಗೆ ಮಾಸ್ಟರ್ ಸ್ಟ್ರೋಕ್ ಆಗಿದೆ.
ಸಿಎಂ ಮತ್ತು ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಇತ್ತ ಶಿವಸೇನೆ ನಾಯಕ ಸಂಜಯ್ ರಾವತ್ ಮುಂಬೈಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡುವ ಮೂಲಕ ದ್ರೋಹವೆಸಗಿದ್ದಾರೆ.ಬಿಜೆಪಿ ಜೊತೆ ಕೈಜೋಡಿಸಿದ್ದು ಅಜಿತ್ ಪವಾರ್ ಅವರ ನಿರ್ಧಾರವೇ ಹೊರತು ಇದಕ್ಕೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರ ಒಪ್ಪಿಗೆಯಿರಲಿಲ್ಲ ಎಂದಿದ್ದಾರೆ.
ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆಯವರು ಇಂದು ಮಧ್ಯಾಹ್ನ ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ತಿಳಿಸಲಿದ್ದಾರೆ. ಅಜಿತ್ ಪವಾರ್ ಮತ್ತು ಅವರ ಬೆಂಬಲಿತ ಶಾಸಕರು ಬಿಜೆಪಿಗೆ ಬೆಂಬಲ ನೀಡಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಮಹಾರಾಷ್ಟ್ರ ಜನತೆಯನ್ನು ಅವಮಾನಿಸಿದ್ದಾರೆ ಎಂದರು.
ನಂತರ ಇದೇ ಸಂದರ್ಭದಲ್ಲಿ ರಾವತ್ ನಿನ್ನೆ ರಾತ್ರಿ ಅಜಿತ್ ಪವಾರ್ ಅವರ ಸಂಶಯಾತ್ಮಕ ನಡೆಯನ್ನು ವಿವರಿಸಿದರು. ನಿನ್ನೆ ರಾತ್ರಿಯವರೆಗೂ ಅಜಿತ್ ಪವಾರ್ ನಮ್ಮ ಜೊತೆಗೇ ಇದ್ದರು. ಹಠಾತ್ತಾಗಿ ನಮ್ಮಿಂದ ಕಾಣೆಯಾದರು. ಅದಕ್ಕೂ ಮುನ್ನ ಅವರು ನಮ್ಮ ಮುಂದೆ ಬರಲು ತಪ್ಪಿಸುತ್ತಿದ್ದರು. ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡಲು ಹಿಂಜರಿಯುತ್ತಿದ್ದರು. ಅವರ ವರ್ತನೆಯಿಂದ ನಮಗೆ ಸಂಶಯವುಂಟಾಗಿತ್ತು ಎಂದು ಸುದ್ದಿಗಾರರಿಗೆ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ