'30 ವರ್ಷ ಮೇಲ್ಪಟ್ಟ ಸುಮಾರು 1 ಲಕ್ಷ ಕ್ರಿಶ್ಚಿಯನ್ ವರರಿಗೆ ವಧುವೇ ಸಿಗ್ತಿಲ್ಲ!
ಕೊಚ್ಚಿ: ಕೇರಳ ರಾಜ್ಯದಲ್ಲಿ 30 ವರ್ಷಕ್ಕೂ ಮೇಲ್ಪಟ್ಟ ಸುಮಾರು 1 ಲಕ್ಷ ಕ್ರಿಶ್ಚಿಯನ್ ಸಮುದಾಯದ ವರರಿಗೆ ವಧುವೇ ಸಿಗುತ್ತಿಲ್ಲ.
ಕೇರಳದಲ್ಲಿ ನಿಷ್ಠಾವಂತ ಸಿರೋ ಮಲಬಾರ್ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಚಂಗನಾಚೆರಿ ಅರ್ಚ್ ಬಿಸಪ್ ಮಾರ್ ಜೋಸೆಫ್ ಪೆರುಮ್ತೊಟ್ಟಮ್ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 6 ರಂದು ಚರ್ಚ್ ಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗಳಲ್ಲಿ ಈ ಪತ್ರವನ್ನು ಓದಲಾಗಿದೆ.
ಕ್ರಿಶ್ಚಿಯನ್ ಸಮುದಾಯದ ಅಸ್ತಿತ್ವಕ್ಕೆ ಅನಿಶ್ಚಿತ ಎಂಬ ರೀತಿಯಲ್ಲಿ ಈ ಪತ್ರವನ್ನು ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೇ, ಹೆಣ್ಣು ಮಕ್ಕಳ ಜನನ ಪ್ರಮಾಣ ಕುಸಿತ, ನಿರುದ್ಯೋಗ, ಕೃಷಿ ಸಮಸ್ಯೆಗಳು ಹಾಗೂ ಇತ್ತೀಚಿಗೆ ಅಪ್ಪಳಿಸಿದ ಭೀಕರ ನೆರೆ ಕ್ರಿಶ್ಚಿಯನ್ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.
ಉತ್ತಮ ಜೀವನ ಹಾಗೂ ಉದ್ಯೋಗವಕಾಶ ಅರಸಿ ದೇಶ ತೊರೆಯುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಹೋದವರು ಮತ್ತೆ ತಮ್ಮ ಮನೆಗಳಿಗೆ ವಾಪಾಸ್ ಆಗುತ್ತಿಲ್ಲ.ಅನೇಕ ಕ್ರಿಶ್ಚಿಯನ್ ಮನೆಗಳಲ್ಲಿ ಹಿರಿಯರು ಮಾತ್ರ ಕಾಣಸಿಗುತ್ತಿದ್ದಾರೆ.
ಕೇರಳ ರಾಜ್ಯ ಉದಯವಾದಾಗ ಕ್ರಿಶ್ಚಿಯನ್ ಸಮುದಾಯ ಎರಡನೇ ಅತಿದೊಡ್ಡ ಸಮುದಾಯವಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ಒಟ್ಟಾರೇ ಜನಸಂಖ್ಯೆಯಲ್ಲಿ ಶೇ. 18. 38 ರಷ್ಟು ಮಾತ್ರ ಈ ಸಮುದಾಯವಿದೆ. ಕ್ರಿಶ್ಚಿಯನ್ ಸಮುದಾಯದಲ್ಲಿ ಜನನ ಪ್ರಮಾಣ ಶೇ.14 ರಷ್ಟು ಕುಸಿತ ಕಂಡಿದ್ದು, ಅಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಅರ್ಚ್ ಬಿಸಪ್ ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ