ಹಣ ವಸೂಲಿಗಾಗಿ ವೆಚ್ಚ ಮಾಡಿದ 'ಕಾನೂನು ಶುಲ್ಕ'ದ ವಿವರ ಬಹಿರಂಗಪಡಿಸಿ: ಎಸ್ ಬಿಐಗೆ ವಿಜಯ್ ಮಲ್ಯ

ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರು...
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರು, ತಮ್ಮ ವಿರುದ್ಧದ ಕಾನೂನು ಹೋರಾಟಕ್ಕೆ ಎಸ್ ಬಿಐ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ತಮ್ಮಿಂದ ಹಣ ವಸೂಲಿಗಾಗಿ ಎಸ್ ಬಿಐ ವಕೀಲರಿಗೆ ನೀಡಿದ ಕಾನೂನು ಶುಲ್ಕವನ್ನು ಯಾರೊಬ್ಬರು ಪ್ರಶ್ನಿಸುತ್ತಿಲ್ಲ ಏಕೆ? ಈ ಕುರಿತು ಆರ್ ಟಿಐ ಅಡಿ ಮಾಧ್ಯಮಗಳು ಮಾಹಿತಿ ಪಡೆಯಬೇಕು ಎಂದು ಮದ್ಯದ ದೊರೆ ಆಗ್ರಹಿಸಿದ್ದಾರೆ.
ನಾನು ಭಾರತದಲ್ಲಿ ಶೇ.100ರಷ್ಟು ಸಾಲ ತೀರಿಸುತ್ತೇನೆ ಎಂದು ಹೇಳಿದರೂ ಎಸ್ ಬಿಐ ಅನಗತ್ಯವಾಗಿ ವಕೀಲರಿಗೆ ಹಣ ಖರ್ಚು ಮಾಡುತ್ತಿದೆ. ಲಂಡನ್ ನಲ್ಲಿರುವ ನನಗೆ ಸೇರಿದ ಕೆಲವು ಆಸ್ತಿಯನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಅದರಿಂದ ಶೇ.50ರಷ್ಚು ಹಣ ಬಂದಿದೆ. ಇನ್ನುಳಿದ ಆಸ್ತಿ ಮಾರಾಟ ಮಾಡಿದರೂ ಸಿಬಿಐಗೆ ಕಾನೂನು ಶುಲ್ಕ ಭರಿಸಲು ಆಗುವುದಿಲ್ಲ. ಇದರ ಉದ್ದೇಶ ಏನು? ಲಂಡನ್ ವಕೀಲರನ್ನು ಶ್ರೀಮಂತರನ್ನಾಗಿ ಮಾಡುವುದಾ? ಎಂದು ಮಲ್ಯ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಎಸ್ ಬಿಐ ಉತ್ತರಿಸಲಿ ಎಂದಿದ್ದಾರೆ.
62 ವರ್ಷದ ವಿಜಯ್ ಮಲ್ಯ ಅವರು 9 ಸಾವಿರ ಕೋಟಿ ರುಪಾಯಿ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿದ್ದು, ಭಾರತಕ್ಕೆ ಬೇಕಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಜಯ್ ಮಲ್ಯ ಗಡಿಪಾರು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಲಂಡನ್ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿವೆ ಎಂದು ಹೇಳಿ, ಗಡಿಪಾರು ಮಾಡಲು ಆದೇಶ ನೀಡಿತ್ತು.
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲೂ ಮದ್ಯದ ದೊರೆಗೆ ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com