ಪ್ರಣಬ್​ ಮುಖರ್ಜಿ, ಹಜಾರಿಕಾ, ನಾನಾಜಿ ದೇಶಮುಖ್ ಗೆ 'ಭಾರತ ರತ್ನ' ಪ್ರದಾನ

ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ 'ಭಾರತ ರತ್ನ' ಪುರಸ್ಕಾರವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್...
ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರದಾನ ಮಾಡುತ್ತಿರುವ ರಾಮನಾಥ್ ಕೋವಿಂದ್
ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರದಾನ ಮಾಡುತ್ತಿರುವ ರಾಮನಾಥ್ ಕೋವಿಂದ್
ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ 'ಭಾರತ ರತ್ನ' ಪುರಸ್ಕಾರವನ್ನು ಮಾಜಿ  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.
ಅಸ್ಸಾಂನ ಸಂಗೀತ ಮಾಂತ್ರಿಕ ದಿವಂಗತ ಭೂಪೆನ್ ಹಜಾರಿಕಾ ಮತ್ತು ಸಮಾಜ ಸೇವಕ ದಿವಂಗತ ನಾನಾಜಿ ದೇಶಮುಖ್ ಅವರಿಗೆ ಮರಣೋತ್ತರವಾಗಿ 'ಭಾರತರತ್ನ' ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮುಖರ್ಜಿಯವರನ್ನು ಅಭಿನಂದಿಸಿದರು. 
2012ರಿಂದ 2017 ರವರೆಗೆ ರಾಷ್ಟ್ರಪತಿಯಾಗಿದ್ದ ಮುಖರ್ಜಿ ಅವರು ಐದು ದಶಕಗಳ ಕಾಲ ವಿಶಿಷ್ಟ ರಾಜಕೀಯ ವೃತಿ ಜೀವನ ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು ಕೇಂದ್ರದಲ್ಲಿ ಹಲವು ಪ್ರಮುಖ ಸಚಿವ ಖಾತೆಗಳನ್ನು ನಿರ್ವಹಿಸಿದ್ದಾರೆ. 
ಭೂಪೆನ್ ಹಜಾರಿಕ ಅವರ ಪುತ್ರ ತೇಜ್ ಹಜಾರಿಕ ತಂದೆಯ ಪರವಾಗಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ದೀನ್‌ ದಯಾಳ್‌ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ವೀರೇಂದ್ರಜಿತ್ ಸಿಂಗ್ ಅವರು ನಾನಾಜಿ ದೇಶಮುಖ್ ಪರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಾಮಾಜಿಕ  ಕಾರ್ಯಕರ್ತ ಮತ್ತು ಆರ್‌ಎಸ್‌ಎಸ್ ನ ಮಾಜಿ ಮುಖಂಡ ನಾನಾಜಿ ದೇಶ್‌ಮುಖ್‌ ಅವರು, ಶಿಕ್ಷಣ,  ಆರೋಗ್ಯ ಮತ್ತು ಗ್ರಾಮೀಣ ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಕೇಂದ್ರ ಸಚಿವರಾದ ಅಮಿತ್  ಶಾ, ನಿರ್ಮಲಾ ಸೀತಾರಾಮನ್, ಹರ್ಷವರ್ಧನ್ ಮತ್ತು ಪ್ರಣಬ್ ಮುಖರ್ಜಿ ಅವರ ಪುತ್ರಿ  ಶರ್ಮಿಸ್ತಾ ಹಾಗೂ ಹಲವು ಗಣ್ಯರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com