ಪಣಜಿ: ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿರುವ ಬಗ್ಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಒತ್ತಾಯಿಸಿದ್ದಾರೆ.
ನಗರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಏನಾದರೂ ಮಾತನಾಡುತ್ತಾರೆಂದು ತಾವು ನಿರೀಕ್ಷಿಸುವುದಿಲ್ಲ. ಆದರೆ ಸೋನಿಯಾ ಗಾಂಧಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ತಪ್ಪು ನೀತಿಗಳಿಂದಾಗಿ, ಕಳೆದ 70 ವರ್ಷಗಳಲ್ಲಿ 370 ವಿಧಿ ಸಮಸ್ಯೆಯನ್ನು ಬಗೆಹರಿಸಲಾಗಲಿಲ್ಲ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು 48 ಗಂಟೆಗಳಲ್ಲಿ ಬಗೆಹರಿಸಿದೆ ಎಂದು ಅವರು ಹೇಳಿದ್ದಾರೆ. '48 ಗಂಟೆಗಳಲ್ಲಿ 70 ವರ್ಷಗಳ ಹೋರಾಟವನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ಮತ್ತು ಪಂಡಿತ್ ನೆಹರು ಅವರ ತಪ್ಪು ನೀತಿಗಳಿಗಳಿಂದ ಪೋರ್ಚುಗೀಸರು ಗೋವಾ ಆಳಿದರು. ದೇಶದ ಅವಿಭಾಜ್ಯ ಅಂಗವಾಗಿದ್ದ ಗೋವಾವನ್ನು ಭಾರತಕ್ಕೆ ಸಂಯೋಜಿಸಲು ಸಾಧ್ಯವಾಗಲಿಲ್ಲ. ತಪ್ಪು ನೀತಿಗಳಿಂದಾಗಿ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
'ಕಾಶ್ಮೀರ ಕೂಡ ಗೋವಾದಂತೆ ಪ್ರಗತಿ ಸಾಧಿಸುತ್ತದೆ ಮತ್ತು ಭಯೋತ್ಪಾದನೆ ಮತ್ತು ಬಡತನ ಕೊನೆಗೊಳ್ಳುತ್ತದೆ ಎಂದ ಚೌಹಾಣ್ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ಗೊಂದಲಕ್ಕೊಳಗಾಗಿದ್ದು, ಆ ಪಕ್ಷದ ನಾಯಕರು ನಾನಾ ರೀತಿ ಮಾತನಾಡುತ್ತಿದ್ದಾರೆ. ಕೆಲವರು 370 ವಿಧಿಯನ್ನು ರದ್ದುಗೊಳಿಸಲು ಒತ್ತಾಯಿಸುತ್ತಿದ್ದರೆ, ಇನ್ನು ಕೆಲವರು ಪಾಕಿಸ್ತಾನದಂತೆ ಮಾತನಾಡುತ್ತಾರೆ. 370 ನೇ ವಿಧಿಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದು ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮಾಡಿದ ಐತಿಹಾಸಿಕ ತಪ್ಪು ಎಂದು ಅವರು ಹೇಳಿದ್ದಾರೆ.
Advertisement