ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಸೆ.1 ರಂದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಕಾಂರ್ಗೆಸ್ ತೊರೆದಿದ್ದ ನಾರಾಯಣ್ ರಾಣೆ, ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷವನ್ನು ಸ್ಥಾಪಿಸಿ ಎನ್ ಡಿಎ ಭಾಗವಾಗಿದ್ದರು, ರಾಜ್ಯಸಭೆಗೆ ಬಿಜೆಪಿ ಬೆಂಬಲದಿಂದ ಆಯ್ಕೆಗೊಂಡಿದ್ದರು. ಅಮಿತ್ ಶಾ ಸೋಲ್ಹಾಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದು ಅದೇ ಕಾರ್ಯಕ್ರಮದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತೇನೆ ಎಂದು ರಾಣೆ ಪತ್ರಕರ್ತರಿಗೆ ತಿಳಿಸಿದ್ದಾರೆ.
ರಾಣೆ ಬಿಜೆಪಿಗೆ ಸೇರ್ಪಡೆಯಾದರೆ ಬಿಜೆಪಿ-ಶಿವಸೇನೆ ಮೈತ್ರಿಗೆ ಧಕ್ಕೆ?
ನಾರಾಯಣ್ ರಾಣೆ ಬಿಜೆಪಿಗೆ ಸೇರ್ಪಡೆಯಾದರೆ ಬಿಜೆಪಿ-ಶಿವಸೇನೆ ಮೈತ್ರಿ ಮೇಲೆ ಪರಿಣಾಮ ಉಂಟಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಾರಾಯಣ್ ರಾಣೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದು ಶಿವಸೇನೆ ಮೂಲಕ. ಆ ನಂತರ ಶಿವಸೇನೆ ರಾಣೆ ಅವರನ್ನು ಅಲ್ಪಾವಧಿಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಿತ್ತು. ಆದರೆ ಶಿವಸೇನೆ ಮೇಲೆ ಮುನಿಸಿಕೊಂಡು ರಾಣೆ ಪಕ್ಷ ತೊರೆದಿದ್ದರು. ಈಗ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಗಊ ರಾಣೆ ನಡುವೆ ಉತ್ತಮ ಬಾಂಧವ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾರಾಯಣ್ ರಾಣೆ ಬಿಜೆಪಿ ಸೇರ್ಪಡೆಗೊಂಡರೆ ಬಿಜೆಪಿ-ಶಿವಸೇನೆ ಮೈತ್ರಿ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ಎನ್ ಸಿಪಿ, ಕಾಂಗ್ರೆಸ್ ನ ಹಲವು ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿ, ಶಿವಸೇನೆ ಸೇರುತ್ತಿದ್ದಾರೆ.
Advertisement