ನಡಿಯಾಡ್(ಗುಜರಾತ್): ರಾಮದೇವರು ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೆ ಸಹ ಪೂರ್ವಜರಾಗಿದ್ದರು ಎಂದು ಯೋಗ ಗುರು ರಾಮದೇವ್ ಹೇಳಿದ್ದಾರೆ.
ನಿನ್ನೆ ಗುಜರಾತ್ ನ ನಡಿಯಾಡ್ ನಲ್ಲಿ ಯೋಗ ಕಾರ್ಯಕ್ರಮವೊಂದರ ಹೊರಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಮ ಮಂದಿರ ಖಂಡಿತವಾಗಿಯೂ ನಿರ್ಮಾಣವಾಗಲೇಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರವಾಗದಿದ್ದರೆ ಮತ್ತೆಲ್ಲಿ ಮೆಕ್ಕಾ ಮದೀನ ಅಥವಾ ವ್ಯಾಟಿಕನ್ ನಗರದಲ್ಲಿ ಆಗುವುದೇ? ರಾಮ ಹುಟ್ಟಿದ ಸ್ಥಳ ಅಯೋಧ್ಯೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ರಾಮನು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂರಿಗೆ ಸಹ ಪೂರ್ವಜನಾಗಿದ್ದ. ಇದರಲ್ಲಿ ರಾಜಕೀಯದ ಪ್ರಶ್ನೆ ಬರುವುದಿಲ್ಲ ಅಥವಾ ವೋಟ್ ಬ್ಯಾಂಕಿಗಾಗಿ ಅಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಅಯೋಧ್ಯೆಗೆ ಹಿಂದೂಗಳು ಪಾದಯಾತ್ರೆ ಬೆಳೆಸಿದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದು ಕೆಲ ದಿನಗಳ ಹಿಂದೆ ರಾಮದೇವ್ ಹೇಳಿಕೆ ನೀಡಿದ್ದರು.
ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸಂಸತ್ತು ಅಥವಾ ಸುಪ್ರೀಂ ಕೋರ್ಟ್ ಏನಾದರೊಂದು ದಾರಿ ಕಂಡುಕೊಳ್ಳಬೇಕು. ಅಯೋಧ್ಯೆಗೆ ಪಾದಯಾತ್ರೆ ಹೋಗುವ ಅಗತ್ಯವಿದ್ದರೆ ಹಿಂದೂಗಳು ಸಾಮೂಹಿಕವಾಗಿ ಪಾದಯಾತ್ರೆ ಬೆಳೆಸಿ ರಾಮಮಂದಿರ ನಿರ್ಮಾಣ ಮಾಡಬೇಕು.
ಹಾಗಾದರೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು.
ಕಳೆದ ಎಂಟು ವರ್ಷಗಳಿಂದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ.
Advertisement