ವಾಜಪೇಯಿಯವರು ದೇಶದ ಪ್ರಗತಿಯನ್ನು ಎಂದಿಗೂ ಕಡೆಗಣಿಸುತ್ತಿರಲಿಲ್ಲ: ಗುಲಾಂ ನಬಿ ಆಜಾದ್

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರಿಗೆ ಪ್ರತಿಪಕ್ಷದ ಮೇಲೆ ಸಿಟ್ಟಾಗಲಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಆದ ಬೆಳವಣಿಗೆಗಳನ್ನು ...
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಪ್ರತಿಪಕ್ಷದ ಮೇಲೆ ಸಿಟ್ಟಾಗಲಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಆದ ಬೆಳವಣಿಗೆಗಳನ್ನು ಕಡೆಗಣಿಸುವುದಾಗಲಿ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದ್ದಾರೆ.

ನಿನ್ನೆ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ವಾಜಪೇಯಿಯವರ ಜೀವ ಗಾತ್ರದ ಭಾವಚಿತ್ರದ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್, ವಾಜಪೇಯಿಯವರ ಮಾತುಗಳು ಮತ್ತು ಕಾರ್ಯವೈಖರಿಯನ್ನು ಎಲ್ಲರೂ ನೆನಪಿಸುತ್ತಾರೆ ಎಂದರು.

ವಿರೋಧ ಪಕ್ಷಗಳನ್ನು ವಾಜಪೇಯಿಯವರು ವಿರೋಧಿಸುತ್ತಿದ್ದರು ಆದರೆ ಅವರ ಮೇಲೆ ಸಿಟ್ಟು ಹೊಂದಿರಲಿಲ್ಲ. ಕಳೆದ 50 ವರ್ಷಗಳಲ್ಲಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿದೆ ಎಂದು ವಾಜಪೇಯಿಯವರು ಶ್ಲಾಘಿಸುತ್ತಿದ್ದರು. ಅವರು ಹೇಳಿರುವ ಮಾತುಗಳನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಹಿಂದಿನ ಮೋದಿ ಸರ್ಕಾರವನ್ನು ಟೀಕಿಸಲು ನನ್ನಲ್ಲಿ ಸಾಕಷ್ಟು ವಿಷಯಗಳಿವೆ, ಈ ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಅಂತಹ ಅನೇಕ ಟೀಕೆಗಳನ್ನು ಮಾಡಬಹುದು. ಆದರೆ ಬೇರೆಯವರಂತೆ ದೇಶದ ಪ್ರಗತಿಯನ್ನು ಕಡೆಗಣಿಸುವ ಕೀಳು ಮನೋಭಾವನೆ ನನಗಿಲ್ಲ ಎಂದು ಪ್ರಧಾನಿ ಮೋದಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ದೇಶದ ಆಡಳಿತವನ್ನು ಟೀಕಿಸಿದರೆ ದೇಶವನ್ನು ಕೀಳಾಗಿ ಕಂಡಂತೆ ಆಗುತ್ತದೆ. ದೇಶದ ರೈತರು, ಕಾರ್ಮಿಕರಿಗೆ ಅನ್ಯಾಯ ಮಾಡಿದಂತೆ, ಅದು ಸಾಮಾನ್ಯ ಜನತೆಗೆ ವಿರುದ್ಧವಾದುದಾಗಿದೆ ಎಂದು ಆಜಾದ್ ಹೇಳಿದರು.

ಗುಲಾಂ ನಬಿ ಆಜಾದ್ 1999ರಲ್ಲಿ ಸಂಸತ್ತಿನಲ್ಲಿ  ವಾಜಪೇಯಿಯವರು ವಿಶ್ವಾಸಮತ ಗೊತ್ತುವಳಿ ಸಂದರ್ಭದಲ್ಲಿ ಭಾಷಣ ಮಾಡಿದ್ದನ್ನು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೊಮರ್ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com