ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಜಾರೆ ಅವರ ಮೆದುಳಿಗೆ ರಕ್ತ ಪೂರೈಕೆಯ ಕೊರತೆಯುಂಟಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಭ್ರಷ್ಟಾಚಾರ-ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಹಜಾರೆ ಲೋಕಪಾಲ್ ವಿಧೇಯಕ ಜಾರಿ, ಲೋಕಪಾಲರ ನೇಮಕಕ್ಕಾಗಿ ಕಳೆದ ಕೆಲ ದಿನಗಳ ಹಿಂದಷ್ಟೇ ಏಳು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.
"ಅಣ್ಣಾ ಅವರ ಮಿದುಳಿಗೆ ರಕ್ತ ಪೂರೈಕೆಯ ಕೊರತೆಯಿಂದಾಗಿ ಶಕ್ತಿ ಹೀನತೆ, ನರದೌರ್ಬಲ್ಯಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ" ಎಂದು ಹಜಾರೆಯವರನ್ನು ಪರಿಶೀಲಿಸಿದ್ದ ಡಾ ಬಾಪು ಕಂದೇಕರ್ ಹೇಳಿದ್ದಾರೆ.
ತಮ್ಮ ಸ್ವಗ್ರಾಮ ರಾಳೆಗನ್ ಸಿದ್ದಿಯಲ್ಲಿ ವಾಸವಿದ್ದ ಹಜಾರೆ ಅವರಿಗೆ ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.ಶುಕ್ರವಾರದ ನಂತರ ಅಣ್ನಾ ಆರೋಗ್ಯದ ಪರಿಸ್ಥಿತಿ ಅರಿತು ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಹಜಾರೆ ಬೆಂಬಲಿಗರಾದ ಸಂಜಯ್ ಪಾದಡೆ ತಿಳಿಸಿದ್ದಾರೆ.