ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ 13 ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿಗೆ ಸೇರಿದ ಮುಂಬೈನ ಆಲಿಬಾಗ್ ನಲ್ಲಿರುವ ಬೀಚ್ ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಕೊನೆಗೂ ಶುಕ್ರವಾರ ಆರಂಭವಾಗಿದೆ.
ಅಲಿಬಾಗ್ ಎಸ್ ಡಿಒ ಶಾರದ ಪವಾರ್ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಬಂಗಲೆ ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಒಂದು ವಾರಗಳ ಕಾಲ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿ ಈ ಬಂಗಲೆಯಲ್ಲಿ ಹಲವು ದೇಶ ವಿದೇಶಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ಔತಣಕೂಟ ಆಯೋಜಿಸುತ್ತಿದ್ದರು ಎನ್ನಲಾಗಿದೆ. ಈ ಕಟ್ಟಡದ ಕುರಿತು ತನಿಖೆ ನಡೆಸಿದ್ದ ಆಲಿಗಢ ಜಿಲ್ಲಾಡಳಿತ ಇದು ಅಕ್ರಮ ನಿರ್ಮಾಣದ ಕಟ್ಟಡ ಎಂದು ಘೋಷಿಸಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚಿಸಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಜಪ್ತಿ ಮಾಡಿತ್ತು. ಈ ಮನೆಯಲ್ಲಿದ್ದ ಬೆಲಬಾಳುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಗುರುವಾರ ಆಲಿಗಢ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿದೆ.
ಈ ಕಟ್ಟಡವನ್ನು ಕೆಡವಲು ಜಾರಿ ನಿರ್ದೇಶನಾಲಯ ಒಂದು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು ಎನ್ನಲಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ, ಒಟ್ಟು 70 ಸಾವಿರ ಚದರಡಿ ವಿಸ್ತೀರ್ಣದ ಜಾಗದಲ್ಲಿ 33 ಸಾವಿರ ಚದರಡಿಯಲ್ಲಿ 2009-10ರಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಲಾಗಿದೆ.
ನೀರವ್ ಮೋದಿ ಜೊತೆಗೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ 58 ಖಾಸಗಿ ಕಟ್ಟಡಗಳ ಮಾಲಿಕರಿಗೂ ನೊಟೀಸ್ ಜಾರಿಗೊಳಿಸಲಾಗಿತ್ತು. ಅಲಿಬಾಗ್ ಪ್ರದೇಶದಲ್ಲಿ ಅಕ್ರಮವಾಗಿ ಖಾಸಗಿ ಕಟ್ಟಡಗಳನ್ನು ನಿರ್ಮಿಸಿದ್ದವರ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಈ ಹಿಂದಿನ ಆದೇಶದಲ್ಲಿ ಸೂಚಿಸಿತ್ತು.