ಮುಂಬೈ: ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ತೀವ್ರ ಹಿನ್ನೆಡೆಯಾಗಿದ್ದು, ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್ ಸಿಪಿ ಮೂವರು ಹಾಗೂ ಕಾಂಗ್ರೆಸ್ ಓರ್ವ ಶಾಸಕ ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಎನ್ ಸಿಪಿಯ ಶಿವೆಂದ್ರರಾಜೆ ಭೋಸಲೆ, ಸಂದೀಪ್ ನಾಯಕ್, ವೈಭವ್ ಪಿಚಡ್ ಹಾಗೂ ಕಾಂಗ್ರೆಸ್ ಕಾಳಿದಾಸ್ ಕೊಲಂಬಕರ್ ಅವರು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಈ ವರ್ಷಾಂತ್ಯದಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈ ನಾಲ್ವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಮತ್ತು ಬಿಜೆಪಿ-ಶಿವಸೇನೆ ಸೀಟು ಹಂಚಿಕೆ ಮೇಲೆ ಅದು ನಿರ್ಧಾರವಾಗಲಿದೆ ಪಕ್ಷದ ಮೂಲಗಳು ತಿಳಿಸಿವೆ.