ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೊದಲ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದಗೌಡ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದರು.
ಕಾನೂನಿನ ಮೂಲಕ ಸ್ಥಾಪಿತವಾಗಿರುವ ಸಂವಿಧಾನಕ್ಕೆ ನಿಷ್ಠೆ ಹಾಗೂ ಶ್ರದ್ಧೆಯನ್ನು ಹೊಂದುವ ಮೂಲಕ ಭಾರತದ ಅಖಂಡತೆ ಹಾಗೂ ಏಕತೆಯನ್ನು ಎತ್ತಿ ಹಿಡಿಯುತ್ತೇನೆ.ಕೈಗೊಳ್ಳಬೇಕಾದ ಕರ್ತವ್ಯಗಳನ್ನು ಶ್ರದ್ದಾ ಪೂರ್ವಕವಾಗಿ ನಿರ್ವಹಿಸುವುದಾಗಿ ದೇವರ ಹೆಸರಿನಲ್ಲಿ ಸದಾನಂದಗೌಡ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನಂತರ 12ನೇಯವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಮತ್ತೊಬ್ಬ ರಾಜ್ಯದ ಸಂಸದ ಪ್ರಹ್ಲಾದ್ ಜೋಷಿ ಕೂಡಾ ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಆದರೆ, ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದರಾಗಿರುವ ಸುರೇಶ್ ಅಂಗಡಿ ಇಂಗ್ಲೀಷ್ ನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಇವರೆಲ್ಲರಿಗೂ ಹಂಗಾಮಿ ಸ್ಪೀಕರ್ ವಿರೇಂದ್ರ ಕುಮಾರ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಸ್ಮೃತಿ ಇರಾನಿ ಮತ್ತಿತರರು ಪ್ರಮಾಣ ವಚನ ಸ್ವೀಕರಿಸಿದರು.