ತಿಮ್ಮಕ್ಕನ ಆಶೀರ್ವಾದ ನನ್ನ ಮನದಾಳವನ್ನು ತಟ್ಟಿತು: ಕನ್ನಡದಲ್ಲಿ ಕೃತಜ್ಞತೆ ಅರ್ಪಿಸಿದ ಕೋವಿಂದ್

ಕರ್ನಾಟಕದ ಪರಿಸರವಾದಿ 107 ವರ್ಷದ ಸಾಲುಮರದ ತಿಮ್ಮಕ್ಕನಿಗೆ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಕ್ಷಣ ಅತ್ಯಂತ ಅಪೂರ್ವವಾದದ್ದು.
ತಿಮ್ಮಕ್ಕನಿಂದ ಆಶೀರ್ವಾದ ಪಡೆದ ರಾಷ್ಟ್ರಪತಿ ಕೋವಿಂದ್
ತಿಮ್ಮಕ್ಕನಿಂದ ಆಶೀರ್ವಾದ ಪಡೆದ ರಾಷ್ಟ್ರಪತಿ ಕೋವಿಂದ್
ನವದೆಹಲಿ:  ಕರ್ನಾಟಕದ ಪರಿಸರವಾದಿ 107 ವರ್ಷದ ಸಾಲುಮರದ ತಿಮ್ಮಕ್ಕನಿಗೆ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಕ್ಷಣ ಅತ್ಯಂತ ಅಪೂರ್ವವಾದದ್ದು. ಇದನ್ನು ಸ್ವತಃ ರಾಷ್ಟ್ರಪತಿಗಳು ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿರುವುದು ಇನ್ನಷ್ಟು ವಿಶೇಷ.
ಗಮನಾರ್ಹ ಸಂಗತಿ ಎಂದರೆ ಪದ್ಮ ಪ್ರಶಸ್ತಿ ನೀಡಿ ಪ್ರಶಸ್ತಿ ಪಡೆದವರನ್ನು ಹರಸುವುದು ರಾಷ್ಟ್ರಪತಿಗಳ ಶಿಷ್ಟಾಚಾರದಲ್ಲಿ ಒಂದು. ಆದರೆ ಸಾಲುಮರದ ತಿಮ್ಮಕ್ಕ ತಾವು ಪ್ರಶಸ್ತಿ ಸ್ವೀಕರಿಸಿ ರಾಷ್ಟ್ರಪತಿ ಕೋವಿಂದ್ ಅವರಿಗೇ ಆಶೀರ್ವದಿಸಿದ್ದಾರೆ. ಇದರಿಂದ ರಾಷ್ಟ್ರಪತಿಗಳು ಪುಳಕಿತರಾಗಿದ್ದಾರೆ.
ನಿನ್ನೆ ನಡೆದ ಸಮಾರಂಭದಲ್ಲಿ ವೇದಿಕೆ ಏರಿ ಪರ್ದಶ್ರೀ ಪ್ರಶಸ್ತಿ ಸ್ವೀಕರಿಸಿದ ತಿಮ್ಮಕ್ಕ ರಾಷ್ಟ್ರಪತಿಗಳ ಮುಂದಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದಾರೆ. ಈ ಸಮಯದಲ್ಲಿ ತಿಮ್ಮಕ್ಕ "ಈ ದೇಶಕ್ಕೆ ದೇವರು ಒಳ್ಳೆಯದು ಮಾಡಲಿ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಮತ್ತು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಧನ್ಯವಾದ. ದೇವರು ನಮ್ಮ ದೇಶವನ್ನು ಸಮೃದ್ಧಿಯಿಂದ ಆಶೀರ್ವದಿಸಬೇಕೆಂದು ನಾನು ಬಯಸುತ್ತೇನೆ ಇದನ್ನೇ ನಾನು ರಾಷ್ಟ್ರಪತಿಗಳಿಗೆ ಹೇಳೀದೆ.ನನಗೆ ವಯಸ್ಸಾಗಿದ್ದರೂ ಇಂದೂ ನಾನು ಗಿಡ, ಮರಗಳ ನೆಡುವುದು, ಪರಿಸರದ ಕಾಳಜಿಯ ಪ್ರಾಮುಖ್ಯತೆ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸುತ್ತೇನೆ" ತಿಮ್ಮಕ್ಕ ಹೇಳಿದ್ದಾರೆ.
ಇನ್ನು ತಿಮ್ಮಕ್ಕನ ಆಶೀರ್ವಾದ ಪಡೆದ ರಾಷ್ಟ್ರಪತಿ "ಪದ್ಮ ಪುರಸ್ಕಾರ ಸಮಾರಂಭದಲ್ಲಿ ಭಾರತದ ಸರ್ವೋತ್ತಮ ಮತ್ತು ಅರ್ಹ ಸಾಧಕರನ್ನು ಗೌರವಿಸುವ ಸುಯೋಗ  ರಾಷ್ಟ್ರಪತಿಗಳದಾಗಿತ್ತು. ಕರ್ನಾಟಕದ ಪರಿಸರವಾದಿ 107 ವರ್ಷ ವಯಸ್ಸಿನ ಈ ವರ್ಷದ ಪದ್ಮ ಪುರಸ್ಕೃತರಲ್ಲಿಯೇ ಹಿರಿಯರಾದ  ಸಾಲು ಮರದ ತಿಮ್ಮಕ್ಕ ಅವರು ನನ್ನನ್ನು ಆಶೀರ್ವದಿಸಿದ್ದು ನನ್ನ ಮನದಾಳವನ್ನು ತಟ್ಟಿತು.
"ಸಾಲು ಮರದ ತಿಮ್ಮಕ್ಕ ಅವರು ಸಾಮಾನ್ಯ ಭಾರತೀಯ ನಾಗರಿಕರ,  ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಸಂಕಲ್ಪ ಶಕ್ತಿ, ಧೃಢತೆ ಮತ್ತು ನಿರಂತರ ಪರಿಶ್ರಮವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಮತ್ತು ಪ್ರತಿ ಪದ್ಮ ಪುರಸ್ಕೃತರ ಉದಾಹರಣೆಗಳು ನಮ್ಮ ಭಾರತವು ಇನ್ನಷ್ಟು ಔನ್ನತ್ಯವನ್ನು ಸಾಧಿಸಲು ಪ್ರೇರಕಶಕ್ತಿಯಾಗಲಿ." ಎಂದು ರಾಷ್ಟ್ರಪತಿ ಕೋವಿಂದ್ ಕನ್ನಡದಲ್ಲೇ ಕೃತಜ್ಞತೆಸಲ್ಲಿಸಿದ್ದಾರೆ.
ಸಾಲುಮರದ ತಿಮ್ಮಕ್ಕನಲ್ಲಿರುವ ಮಾತೃ ಹೃದಯದ ಮುಗ್ಧತೆ ಮತ್ತು ಪ್ರೀತಿಗೆ ಇಡೀ ರಾಷ್ಟ್ರವೇ ತಲೆಬಾಗಿದೆ.ತಿಮ್ಮಕ್ಕನಿಗೆ ಪ್ರಶಸ್ತಿ ನೀಡಿದ ಸಮಯದ ವೀಡಿಯೋ, ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರೀ ಪ್ರಶಸೆ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com