ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಸೇರಿದಂತೆ ಮೂವರು ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಿರುವ ಹಿನ್ನೆಲೆ ಸಂಗೀತದೊಂದಿಗಿನ ವೀಡಿಯೋ ಸಾಂಗ್ ಒಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಕರ್ತಾರ್ಪುರ್ ಸಾಹೀಬ್ ಗುರುದ್ವಾರದಲ್ಲಿ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಪಾಕಿಸ್ತಾನ ಈ ವಿಡಿಯೋ ಬಳಕೆ ಮಾಡುತ್ತಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವಿವಾದಾತ್ಮಕ ವಿಡಿಯೋದಲ್ಲಿ ಭಿಂದ್ರಾನ್ವಾಲೆ ಅಲ್ಲದೆ ಮೇಜರ್ ಜನರಲ್ ಶಬೇಗ್ ಸಿಂಗ್ ಮತ್ತು ಅಮರಿಕ್ ಸಿಂಗ್ ಖಲ್ಸಾ ಅವರ ಪೋಸ್ಟರ್ಗಳಿವೆ. 1984 ರ ಜೂನ್ನಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲಿ ಈ ಮೂವರನ್ನು ಕೊಲ್ಲಲಾಗಿತ್ತು.
ಭಿಂದ್ರಾನ್ವಾಲೆ ಸಿಖ್ ಧಾರ್ಮಿಕ ಪಂಥದ ದಮದಮಿ ತಕ್ಸಲ್ ಮುಖ್ಯಸ್ಥರಾಗಿದ್ದರು. ಸಿಂಗ್ ಅವರು ಭಾರತೀಯ ಸೇನಾ ಜನರಲ್ ಆಗಿದ್ದವರು 1984 ರಲ್ಲಿ ಖಲಿಸ್ತಾನಿ ಚಳವಳಿಗೆ ಸೇರ್ಪಡೆಗೊಂಡ ಬಳಿಕ ತಮ್ಮ ಹುದ್ದೆಯಿಂದ ಕೆಲಗಿಳಿಸಲ್ಪಟ್ಟರು. ಅಲ್ಲದೆ ತಮ್ಮ ನಿವೃತ್ತಿಗೆ ಸ್ವಲ್ಪ ಸಮಯದ ಮೊದಲು ಭ್ರಷ್ಟಾಚಾರದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದ್ರಿಸಿದ್ದರು.ಖಲ್ಸಾ ಖಲಿಸ್ತಾನಿ ವಿದ್ಯಾರ್ಥಿ ನಾಯಕರಾಗಿದ್ದು, ಈಗ ನಿಷೇಧಿತವಾಗಿರುವ ಅಖಿಲ ಭಾರತ ಸಿಖ್ ವಿದ್ಯಾರ್ಥಿ ಒಕ್ಕೂಟದ (ಎಐಎಸ್ಎಸ್ಡಿ) ಮುಖ್ಯಸ್ಥರಾಗಿದ್ದರು.
ಕಾರ್ತಾರ್ಪುರ ಕಾರಿಡಾರ್ ತೆರೆಯುವ 70 ವರ್ಷದ ಬೇಡಿಕೆಯನ್ನು ಅಂಗೀಕರಿಸುವ ಪಾಕಿಸ್ತಾನದ ಹಠಾತ್ ನಿರ್ಧಾರದ ಬಗ್ಗೆ ಸೋಮವಾರ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು, ಇದು ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಿಖ್ ಸಮುದಾಯದಲ್ಲಿ ಒಡಕು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.ಪಾಕಿಸ್ತಾನದ ಈ ಕ್ರಮವು "ಅದರ ಒಳಮರ್ಮವನ್ನು" ತೋರಿಸುತ್ತದೆ ಎಂದು ಸಿಂಗ್ ಒತ್ತಿ ಹೇಳಿದ್ದಾರೆ. ಅಲ್ಲದೆ ನೆರೆರಾಷ್ಟ್ರದ ಯಾವುದೇ ದುಷ್ಕೃತ್ಯದ ಹುನ್ನಾರವನ್ನು ಅರಿಯಲು ಪಂಜಾಬ್ ಸರ್ಕಾರ ಜಾಗೃತವಾಗಿದೆ ಎಂದರು.
"ಸಿಖ್ ಸಮುದಾಯವು ಕಳೆದ 70 ವರ್ಷಗಳಿಂದ ಪವಿತ್ರ ಕರ್ತಾರ್ಪುರ ದೇಗುಲಕ್ಕೆ ತೆರಳಲು ಅನುವು ಮಾಡಿಕೊಡುವಂತೆ ಕೇಳುತ್ತಿತ್ತು, ಆದರೆ ಪಾಕಿಸ್ತಾನ ಎಂದಿಗೂ ಆ ಬಗೆಗೆ ಮನ ಮಾಡಿರಲಿಲ್ಲ. ಆದರೆ ಈಗ ಹಠಾತ್ತನೆ ನಿರ್ಧಾರ ಮಾಡಿರುವುದು ಒಂದು ಧಾರ್ಮಿಕ ಉದ್ದೇಶವನ್ನು ಸೂಚಿಸುತ್ತದೆ, ಇದು ಸಿಖ್ ಸಮುದಾಯದಲ್ಲಿ ಒಡಕು ಮೂಡಿಸಿ ತಮ್ಮ ಧಾರ್ಮಿಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. "ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದರು.
"ಕಾರಿಡಾರ್ ಮೂಲಕ ಪಾಕಿಸ್ತಾನ ಯಾವುದೇ ಕಿಡಿಗೇಡಿತನ ಮಾಡುವ ಧೈರ್ಯವನ್ನು ನಾವು ನಿರೀಕ್ಷಿಸುವುದಿಲ್ಲವಾದರೂ, ಗಡಿ ರಾಜ್ಯವಾಗಿ, ಪಂಜಾಬ್ ಜಾಗರೂಕರಾಗಿರುವುದು ಬಹಳ ಮುಖ್ಯ" ಎಂದು ಮುಖ್ಯಮಂತ್ರಿ ಹೇಳಿದರು,
Advertisement