ಮುಂಬೈ: ನಿರ್ಗಮಿತ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇನ್ನು ಎರಡು ದಿನಗಳಲ್ಲಿ ಮುಗಿಯಲಿದ್ದು ಈ ಸಂದರ್ಭದಲ್ಲಿ ನೂತನ ಸರ್ಕಾರ ರಚನೆಗೆ ಕೊನೆಗೂ ಬಿಜೆಪಿ-ಶಿವಸೇನೆಯ ಮಹಾಯುತಿ ಮೈತ್ರಿಕೂಟ ಒಂದು ತೀರ್ಮಾನಕ್ಕೆ ಬರುವಂತಿದೆ. ಎರಡೂ ಪಕ್ಷಗಳ ನಾಯಕರು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಇಂದು ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಸದ್ಯ ಬಿಜೆಪಿ ಮತ್ತು ಶಿವಸೇನೆ ಮಾಡಿಕೊಂಡಿರುವ ಒಪ್ಪಂದ ಪ್ರಕಾರ, ನೂತನ ಸರ್ಕಾರದಲ್ಲಿ ಸ್ಟೀರಿಂಗ್ ಸಮಿತಿಯನ್ನು ರಚಿಸಲಿದ್ದು ಅದಕ್ಕೆ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿದುಬಂದಿದೆ.
ನಿನ್ನೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕರೆದಿದ್ದ ಸಚಿವರುಗಳ ಸಭೆಯಲ್ಲಿ ಶಿವಸೇನೆಯ ಸಚಿವರುಗಳು ಕೂಡ ಭಾಗವಹಿಸಿದ್ದರು. ಶಿವಸೇನೆಯ ಇಬ್ಬರು ಸಚಿವರು ದೇವೇಂದ್ರ ಫಡ್ನವಿಸ್ ಜೊತೆ ಸರ್ಕಾರ ರಚನೆ ಸಂಬಂಧ ಕೂಡ ಮಾತುಕತೆಯಾಡಿದ್ದಾರೆ. ಮಿತ್ರಪಕ್ಷವನ್ನು ಸಮಾಧಾನಪಡಿಸಲು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸ್ಟೀರಿಂಗ್ ಸಮಿತಿಯನ್ನು ರಚಿಸುವುದು ಕೂಡ ಪ್ರಸ್ತಾವನೆಗಳಲ್ಲಿ ಒಂದಾಗಿದೆ.
Advertisement