ನವದೆಹಲಿ: ದೇಶದ ವೈವಿಧ್ಯತೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಗೌರವಿಸುತ್ತದೆ ಮಾತ್ರವಲ್ಲದೆ ಬಹುತ್ವವನ್ನು ಒಪ್ಪದೆ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ(ಎನ್ಎಂಎಂಎಲ್)ದಲ್ಲಿ ನಿನ್ನೆ ಭಾಷಣ ಮಾಡಿದ ಅವರು, ನೆಹರೂ ಅವರ ಪರಂಪರೆಯನ್ನು ಎತ್ತಿಹಿಡಿಯಲು ಮೋದಿ ಸರ್ಕಾರ ಸಾಮರ್ಥ್ಯ, ದೂರದೃಷ್ಟಿ ಮತ್ತು ಬುದ್ದಿವಂತಿಕೆಯ ಕೊರತೆ ಹೊಂದಿದೆ ಎಂದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ ಅವರ 130ನೇ ಜಯಂತಿ ಸಂದರ್ಭದಲ್ಲಿ ದೇಶದ ಜನತೆ ಕಳೆದ ಆರು ವರ್ಷಗಳ ಧರ್ಮಾಂಧತೆ, ಅನ್ಯಾಯ ಮತ್ತು ದುರುಪಯೋಗ ಆಡಳಿತ ವಿರುದ್ಧ ಒಟ್ಟಾಗಿ ಮಾತನಾಡಬೇಕಿದೆ ಎಂದು ಕರೆಕೊಟ್ಟರು.
ಜವಾಹರಲಾಲ ನೆಹರೂರವರ ದೂರದೃಷ್ಟಿ ನಾಲ್ಕು ಆಧಾರಸ್ಥಂಭಗಳಂತೆ ನಿಂತಿದ್ದವು ಅವುಗಳೆಂದರೆ ಪ್ರಜಾಪ್ರಭುತ್ವ, ದೃಢ ಜಾತ್ಯತೀತತೆ, ಸಮಾಜವಾದಿ ಅರ್ಥಶಾಸ್ತ್ರ ಮತ್ತು ತಟಸ್ಥ ಅಥವಾ ಅಲಿಪ್ತ ವಿದೇಶಾಂಗ ನೀತಿ ಇವುಗಳು ನಿಜವಾದ ಭಾರತದ ಪ್ರಮುಖ ಅಂಶಗಳಾಗಿವೆ ಎಂದರು.
ಇಂದು ಅಧಿಕಾರದಲ್ಲಿರುವವರು ಈ ಸತ್ಯದ ಬಗ್ಗೆ ಕುರುಡರಾಗಿದ್ದಾರೆ, ಅವರಲ್ಲಿ ನೆಹರೂರವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ, ಬುದ್ದಿವಂತಿಕೆ ಮತ್ತು ದೂರದೃಷ್ಟಿಯ ಕೊರತೆಯಿದೆ. ಕೇಂದ್ರದ ಮೋದಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ದೂರಿದರು.
Advertisement