ಮುಂಬೈ:ಛತ್ರಪತಿ ಶಿವಾಜಿ ಯಾವುದೇ ಒಂದು ಜಾತಿ ಅಥವಾ ಪಕ್ಷಕ್ಕೆ ಸೀಮಿತವಾದವರಲ್ಲ, ಅವರು ಮಹಾರಾಷ್ಟ್ರದ 11 ಕೋಟಿ ಜನರಿಗೆ ಸೇರಿದವರು ಎಂದು ಶಿವಸೇನೆ ಮತ್ತೊಮ್ಮೆ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ತಮ್ಮ ವಾರದ ರೋಖೋಕ್ ಅಂಕಣದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ವಕ್ತಾರ ಸಂಜಯ್ ರಾವತ್ ಈ ಕುರಿತು ಬರೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ವಂಶ, ಪರಂಪರೆ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಚುನಾವಣಾ ಪ್ರಚಾರ ನಡೆಸಿತ್ತು. ತಮ್ಮ ಪಕ್ಷಕ್ಕೆ ಮಾತ್ರ ಶಿವಾಜಿ ಮಹಾರಾಜರ ಆಶೀರ್ವಾದವಿದೆ ಎಂಬರ್ಥದಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಉದಯನ್ ರಾಜೆ ಭೋಸ್ಲೆ ಸತಾರಾ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಕಂಡಿದ್ದಾರೆ.
ಇವರು ಛತ್ರಪತಿ ಶಿವಾಜಿ ಮಹಾರಾಜರ ವಂಶದವರು, ಇದು ಆ ವ್ಯಕ್ತಿಯ ಸೋಲು ಹೊರತು ಶಿವಾಜಿ ಮಹಾರಾಜರ ಪರಂಪರೆಯ ಸೋಲು ಅಲ್ಲ ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಜನತೆ ಸಿಟ್ಟು, ಆಕ್ರೋಶ ಮತ್ತು ಬೂಟಾಟಿಕೆಗಳನ್ನು ಸಹಿಸುವುದಿಲ್ಲ ಎಂದು ನಮಗೆ ಶಿವಾಜಿ ಮಹಾರಾಜರು ಹೇಳಿಕೊಟ್ಟಿದ್ದಾರೆ. ಶಿವಾಜಿ ಮಹಾರಾಜರ ಹೆಸರಿನಲ್ಲಿ ನಾಯಕರು ಪ್ರಮಾಣ ತೆಗೆದುಕೊಂಡ ನಂತರ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಿಲ್ಲ. ತಾವು ಈ ರಾಜ್ಯವನ್ನಾಳುವವರು ಎಂದು ಯೋಚಿಸುತ್ತಾರೆ. ಇದು ಅವರ ಅವನತಿಯನ್ನು ತೋರಿಸುತ್ತದೆ ಎಂದು ರಾವತ್ ಹೇಳಿದರು.
Advertisement