ಮುಂಬೈ: ಕಳೆದೊಂದು ತಿಂಗಳಿನಿಂದ ದಿನಕ್ಕೊಂದು, ಕ್ಷಣಕ್ಕೊಂದು ರೀತಿಯ ಕುತೂಹಲಗಳಿಗೆ ಕಾರಣವಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಮುಂದಿನ ಮುಖ್ಯಮಂತ್ರಿಯತ್ತ ನೆಟ್ಟಿದೆ.
ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದಿಂದ ಉದ್ದವ್ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಆರಂಭದಲ್ಲಿ ಆದಿತ್ಯ ಠಾಕ್ರೆ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತಾದರೂ ಅನುಭವದ ಕೊರತೆ ಹಾಗೂ ಮೂರು ಪಕ್ಷಗಳೊಂದಿಗೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಉದ್ದವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಿದ್ಧತೆ ನಡೆಸಲಾಗಿದೆ.
ಉದ್ದವ್ ಠಾಕ್ರೆ ಐದು ವರ್ಷಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರವಾತ್ ಸ್ಪಷ್ಟಪಡಿಸಿದ್ದಾರೆ. ರವಾತ್ ಅವರ ಈ ಹೇಳಿಕೆಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹುದ್ದೆ ತಲಾ ಎರಡೂವರೆ ವರ್ಷಗಳ ಕಾಲ ಶಿವಸೇನೆ ಹಾಗೂ ಎನ್ ಸಿಪಿ ನಡುವೆ ಹಂಚಿಕೆಯಾಗಲಿದೆ ಎಂಬಂತಹ ಸುದ್ದಿ ಹರಿದಾಡಿತ್ತು. ಆದರೆ,ಐದು ವರ್ಷಗಳ ಕಾಲ ಉದ್ದವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸಂಜಯ್ ರಾವತ್ ಅವರ ಹೇಳಿಕೆ ಮತ್ತೊಂದು ರೀತಿಯ ಅನುಮಾನಕ್ಕೂ ಕಾರಣವಾಗಿದೆ.
ನಾಳೆ ಸಂಜೆಯೊಳಗೆ ವಿಶ್ವಾಸಮತ ಯಾಚನೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಮಹಾರಾಷ್ಟ್ರದಲ್ಲಿನ ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.
Advertisement