ಕೋಲ್ಕತ್ತಾ: ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್.ಆರ್.ಸಿ) ಅನ್ನು ಪಶ್ಚಿಮ ಬಂಗಾಳಕ್ಕೂ ವಿಸ್ತರಿಸುತೇವೆ. ಅದಕ್ಕೆ ಮುನ್ನ ಎಲ್ಲಾ ಹಿಂದೂ, ಸಿಖ್ಖ್, ಜೈನ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿಯವರೆಗೆ ಅಸ್ಸಾಂಗೆ ಮಾತ್ರ ಸೀಮಿತವಾಗಿದ್ದ ವಿವಾದಾತ್ಮಕ ಎನ್ಆರ್ಸಿ ಅನ್ನು ಪಶ್ಚಿಮ ಬಂಗಾಳದಲ್ಲಿ ಸಹ ಜಾರಿಗೆ ತರುವುದು ಖಚಿತ ಎಂದು ಅವರು ಹೇಳಿದ್ದಾರೆ. ವಿವಾದಾತ್ಮಕ ಎನ್ಆರ್ಸಿ ಕುರಿತ ಸೆಮಿನಾರ್ನಲ್ಲಿ ಮಾತನಾಡಿದ ಶಾ ಬಂಗಾಳದ ಟಿಎಂಸಿ ಸರ್ಕಾರ ಪೌರತ್ವ ಪಟ್ಟಿಯ ಕುರಿತಂತೆ ಜನರ ದಿಕ್ಕು ತಪ್ಪಿಸುತ್ತಿದೆ ಎಂದಿದ್ದಾರೆ.
"ಬಂಗಾಳದ ಸರ್ಕಾರ ಎನ್ಆರ್ಸಿ ಬಗ್ಗೆ ಜನರಿಗೆ ದಾರಿ ತಪ್ಪಿಸುತ್ತಿದೆ.ಎಲ್ಲಾ ಹಿಂದೂ, ಬೌದ್ಧ, ಸಿಖ್ಖ್, ಜೈನ ನಿರಾಶ್ರಿತರು ಸೇರಿ ಯಾರೂ ದೇಶ ತೊರೆಯಬೇಕಿಲ್ಲ.ಅವರು ಭಾರತೀಯ ಪೌರತ್ವ ಪಡೆಯುತ್ತಾರೆ ಮತ್ತು ಭಾರತದಲ್ಲಿ ಜಾರಿಯಲ್ಲಿರುವ ಎಲ್ಲಾ ಸೌಲಭ್ಯವನ್ನೂ ಹೊಂದಲಿದ್ದಾರೆ, ಹಕ್ಕುಗಳನ್ನು ಅನುಭವಿಸುತ್ತಾರೆ" ಎಂದು ಅವರು ಭರವಸೆ ನೀಡಿದರು. .
ಆದಾಗ್ಯೂ, ಎಲ್ಲಾ ಒಳನುಸುಳುವವರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಅವರು ಪ್ರತಿಪಾದಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಅಮಿತ್ ಶಾ ಇದು ರಾಜ್ಯವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸೇರ್ಪಡೆಗೊಳಿಸಲು ಅನುಕೂಲ ಕಲ್ಪಿಸಿದೆ ಎಂದಿದ್ದಾರೆ.ಬಿಜೆಪಿಯ ಮೂಲ ಸಂಘಟನೆ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಉಲ್ಲೇಖಿಸಿದ ಶಾ ಆ ಹಿರಿಯ ನಾಯಕರ ತ್ಯಾಗದಿಂದಾಗಿ ಪಶ್ಚಿಮ ಬಂಗಾಳ ಇಂದು ಭಾರತೀಯ ಗಣರಾಜ್ಯದ ಒಂದು ಭಾಗವಾಗಿದೆ ಎಂದರು.
Advertisement