ಮುಂಬೈ: ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯ ಪ್ರವೇಶಿಸಿರುವ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಅವರು, ಮುಂಬೈನ ಪ್ರಮುಖ ಹಸಿರು ಪ್ರದೇಶವಾಗಿರುವ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಗಾಗಿ ಮರಗಳನ್ನು ಕಡಿಯುತ್ತಿರುವುದಕ್ಕೆ ಬಿಜೆಪಿ, ರಾಜ್ಯ ಸರ್ಕಾರ ಹಾಗೂ ಮುಂಬೈ ಮೆಟ್ರೋ ರೈಲು ನಿಗಮವನ್ನು ದೂರಿದ್ದಾರೆ.
ಈ ಸಂಬಂಧ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ವೊರ್ಲಿ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದಿರುವ ಆದಿತ್ಯ ಠಾಕ್ರೆ, ಆರೆ ವಿಚಾರದಲ್ಲಿ ಶಿವಸೇನೆ ಮತ್ತು ಬಿಎಂಸಿ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಹಸಿರು ಪರವಾಗಿದ್ದೇವೆ ಎಂದು ಹೇಳಿದ್ದಾರೆ.
ಮೆಟ್ರೋ ಡಿಪೋ ವಿರೋಧಿಸಿದ ಏಕೈಕ ಪಕ್ಷ ಶಿವಸೇನೆ. ಅಭಿವೃದ್ಧಿ ಯೋಜನೆ 2034ರ ಪ್ರಸ್ತಾವನೆಯನ್ನು ನಮ್ಮ ಪಕ್ಷ ತಿರಸ್ಕರಿಸಿದೆ ಎಂದು ಆದಿತ್ಯ ಠಾಕ್ರೆ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆ ಅಧಿಕಾರದಲ್ಲಿದ್ದಾಗ ಸುಮಾರು 2,700 ಮರಗಳನ್ನು ಕಡಿಯುವ ಪ್ರಸ್ತಾಪವನ್ನು ಎರಡು ವರ್ಷಗಳ ಕಾಲ ತಡೆ ಹಿಡಿಯಲಾಗಿತ್ತು. ಆದರೆ ತಜ್ಞರ ಸಮಿತಿ ಮತ್ತು ಬಹುಪಾಲು ಜನ ಮರ ಕಡಿಯಲು ಒಪ್ಪಿಗೆ ಸೂಚಿಸಿದ ನಂತರ ರಾಜ್ಯ ಸರ್ಕಾರ ಮರಗಳ ಮಾರಣಹೋಮಕ್ಕೆ ನಿರ್ಧರಿಸಿತು ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
Advertisement