ಅಯೋಧ್ಯೆ: ಅಯೋಧ್ಯೆ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ ಬೆನ್ನಲ್ಲೇ, ವಿವಾದಿತ ಸ್ಥಳದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೀಪ ಹಚ್ಚಲು ಅವಕಾಶ ಕೋರಿದ್ದ ವಿಶ್ವ ಹಿಂದು ಪರಿಷತ್ ಮನವಿಯನ್ನು ಕೂಡ ಜಿಲ್ಲಾಡಳಿತ ತಿರಸ್ಕರಿಸಿದೆ.
ವಿಎಚ್ ಪಿ ವಿವಾದಿತ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದರೆ ಅದಕ್ಕೂ ಮುನ್ನ ಅವರು ಸುಪ್ರೀಂಕೋರ್ಟ್ ನ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಮಿಶ್ರಾ ಹೇಳಿದ್ಧಾರೆ.
ಅ. 27ರಂದು ದೀಪಾವಳಿ ಪ್ರಯುಕ್ತ ವಿವಾದಿತ ಸ್ಥಳದಲ್ಲಿ ದೀಪ ಹಚ್ಚಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಂತರು ಮತ್ತು ರಾಜಕೀಯ ನಾಯಕರ ಸಹಿಯನ್ನೊಳಗೊಂಡ ಮನವಿಯನ್ನು ವಿ ಎಚ್ ಪಿ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು.
ಈ ಕುರಿತು ಹೇಳಿಕೆ ನೀಡಿರುವ ವಿಎಚ್ ಪಿ ವಕ್ತಾರ ಶರದ್ ಶರ್ಮಾ, ರಾಮನ ಜನ್ಮಸ್ಥಳದಲ್ಲಿ ನಾವು ದೀಪೋತ್ಸವವನ್ನು ಆಚರಿಸಲು ಬಯಸುತ್ತೇವೆ. ಇದೇನು ಹೊಸ ಪದ್ಧತಿಯಲ್ಲ ಎಂದಿದ್ದಾರೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಡಿಸೆಂಬರ್ 10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Advertisement