ನವದೆಹಲಿ: ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಪೋಷಿಸುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮನ್ನು ಭೇಟಿ ಮಾಡಿದ ಯೂರೋಪಿಯನ್ ಯೂನಿಯನ್(ಇಯು) ಸಂಸದರ ನಿಯೋಗಕ್ಕೆ ತಿಳಿಸಿದ್ದಾರೆ.
ಭಾರತ ಪ್ರವಾಸದಲ್ಲಿರುವ ಇಯು ಸಂಸದರ ನಿಯೋಗ ನಾಳೆ ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅದಕ್ಕು ಮುನ್ನ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಶೂನ್ಯ ಸಹಿಷ್ಣುತೆ ಭಾವ ಹೊಂದಿರಬೇಕು. ತಾವು ಯಾವುದೇ ಕಾರಣಕ್ಕೂ ಭಯೋತ್ಪಾದಕರಿಗೆ ಕನಿಕರ ತೋರಿಸುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.
ದೇಶದ ವಿವಿಧ ಭಾಗಗಳಿಗೆ ಇಯು ಸಂಸದರ ನಿಯೋಗದ ಭೇಟಿ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರು ಪ್ರಧಾನಿ, ಜಮ್ಮು ಕಾಶ್ಮೀರ ಮತ್ತು ಲಡಾಕ್ ಹೊಂದಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿಯಲು ಇಯು ಸಂಸದರ ನಿಯೋಗಕ್ಕೆ ಈ ಪ್ರವಾಸ ಸಹಕಾರಿಯಾಗಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಭಯೋತ್ಪಾದನೆಯನ್ನು ತಮ್ಮ ಕಾರ್ಯನೀತಿಯನ್ನಾಗಿಸಿಕೊಂಡಿರುವ ರಾಷ್ಟ್ರಗಳ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರು ಯಾವುದೇ ರಾಷ್ಟ್ರದ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಪ್ರಧಾನಿ ಚಾಟಿ ಬೀಸಿದ್ದಾರೆ.
ಸುಲಭವಾಗಿ ವ್ಯಾಪಾರ ಮಾಡಬಹುದಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 63 ನೇ ಸ್ಥಾನಕ್ಕೇರಿರುವುದನ್ನು ಪ್ರಧಾನಿ ಮೋದಿ ನಿಯೋಗಕ್ಕೆ ತಿಳಿಸಿದ್ದಾರೆ.
Advertisement