ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ನೀಡಿದ ಸುಪ್ರೀಂ ಕೋರ್ಟ್ ಯಾವುದೇ ರಾಜಕೀಯ ರ್ಯಾಲಿ ನಡೆಸುವಂತಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ನಾಲ್ಕು ಜಿಲ್ಲೆಗಳಾದ ಶ್ರೀನಗರ, ಜಮ್ಮು, ಬರಮುಲ್ಲಾ ಮತ್ತು ಅನಂತ್ ನಾಗ್ ಜಿಲ್ಲೆಗಳಿಗೆ ಭೇಟಿ ನೀಡಿ ಜನರನ್ನು ಭೇಟಿಯಾಗಬಹುದು ಎಂದು ಹೇಳಿದೆ.
ಆಜಾದ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎ ಎಂ ಸಿಂಘ್ವಿ, ಜಮ್ಮು-ಕಾಶ್ಮೀರ ಜನತೆಯನ್ನು ಭೇಟಿ ಮಾಡಿ ಅವರ ಅಭಿವೃದ್ಧಿ ಬಗ್ಗೆ ವಿಚಾರಿಸಲು ಗುಲಾಂ ನಬಿ ಆಜಾದ್ ಬಯಸುತ್ತಿದ್ದಾರೆ ಎಂದರು.
ಈ ಹಿಂದೆ ಆಜಾದ್ ಅವರು ಮೂರು ಬಾರಿ ಜಮ್ಮುವಿಗೆ ಭೇಟಿ ನೀಡಲು ಪ್ರಯತ್ನಿಸಿದರೂ ವಿಮಾನ ನಿಲ್ದಾಣದಿಂದ ವಾಪಸ್ಸು ಕಳುಹಿಸಲಾಗಿತ್ತು ಎಂದಿದ್ದಾರೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಗುಲಾಂ ನಬಿ ಆಜಾದ್ ತಮ್ಮ ಕುಟುಂಬ ವರ್ಗದವರನ್ನು ಮತ್ತು ಸಂಬಂಧಿಕರನ್ನು ಸಹ ಭೇಟಿ ಮಾಡಲು ಅವಕಾಶ ಕೋರಿದ್ದರು.
ಕೇಂದ್ರ ಸರ್ಕಾರ ಸಂವಿಧಾನ ವಿಧಿ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದ ಪರಿಸ್ಥಿತಿ ತಿಳಿಯಲು ಅಲ್ಲಿನ ಸಾಮಾಜಿಕ ಪರಿಸ್ಥಿತಿಯನ್ನು ತಿಳಿಯಲು ಭೇಟಿ ನೀಡಲು ಅವಕಾಶ ಕೋರಿ ಗುಲಾಂ ನಬಿ ಆಜಾದ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
Advertisement