ನವದೆಹಲಿ: ಮೆಹರೂಲಿ ಬಿಜೆಪಿ ಜಿಲ್ಲಾ ಘಟಕದ ಮುಖ್ಯಸ್ಥ ಅಜಾದ್ ಸಿಂಗ್ ದಕ್ಷಿಣ ದೆಹಲಿಯ ಮಾಜಿ ಮೇಯರ್ ಆಗಿದ್ದ ತನ್ನ ಪತ್ನಿ ಮೇಲೆ ಪಕ್ಷದ ಕಚೇರಿಯಲ್ಲಿಯೇ ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ವಿಧಾಸಭಾ ಚುನಾವಣೆ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಭೆ ನಡೆಸಿದ ಬಳಿಕ ಪಂಥ್ ಮಾರ್ಗದಲ್ಲಿನ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು,ಇಬ್ಬರು ವೈವಾಹಿಕ ಜೀವನದಲ್ಲಿ ಸಮಸ್ಯೆ ಹೊಂದಿದ್ದು,ಅಜಾದ್ ಸಿಂಗ್ ಇತ್ತೀಚಿಗೆ ತನ್ನ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಇಬ್ಬರೂ ಅನೇಕ ವರ್ಷಗಳಿಂದಲೂ ವೈವಾಹಿಕ ಜೀವನದಲ್ಲಿ ಸಮಸ್ಯೆ ಹೊಂದಿದ್ದರು. ಆದಾಗ್ಯೂ, ಇದಕ್ಕಾಗಿಯೇ ಅಜಾದ್ ಸಿಂಗ್ ನಡೆಸಿದ್ದಾನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ನಿರ್ದೇಶನದ ಮೇರೆಗೆ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಮೆಹರೂಲಿ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ಅಜಾದ್ ಸಿಂಗ್ ಅವರನ್ನು ಕಿತ್ತುಹಾಕಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೀಶ್ ಬಾಟಿಯಾ ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ಮಾಜಿ ಮೇಯರ್ ಹಾಗೂ ಪತ್ನಿ ಆಗಿರುವ ಸರಿತಾ ಚೌದರಿ ಅವರೊಂದಿಗೆ ಅಜಾದ್ ಸಿಂಗ್ ವಿವಾದ ವಿತ್ತು, ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಜಾವಡೇಕರ್ ಪಕ್ಷದ ಕಚೇರಿಯಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಆದಾಗ್ಯೂ, ಚೌದರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಅಜಾದ್ ಸಿಂಗ್ ಹೇಳಿದ್ದಾನೆ.
ಯಾರಿಂದಲೂ ಘಟನೆ ಸಂಬಂಧ ದೂರು ಸ್ವೀಕರಿಸಿಲ್ಲ ಎಂದು ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯನ್ನು ಪಕ್ಷದ ಹಿರಿಯ ನಾಯಕರು ಗಂಭೀರವಾಗಿ ಪರಗಣಿಸಿದ್ದು, ಅಜಾದ್ ಸಿಂಗ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
Advertisement