ಇಂದೋರ್: ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರಿಂದ ಚಲನ್ ಪಡೆದ ಅಪರಿಚಿತ ಸವಾರನೊಬ್ಬ ಬೈಕಿಗೆ ಬೆಂಕಿ ಹಚ್ಚಿ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ.ಮಧ್ಯಪ್ರದೇಶದ ಇಂದೋರ್ ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಸಂಚಾರಿ ಪೊಲೀಸರು ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆತನಿಂದ ಹಣ ಕಿತ್ತಿದ್ದಾರೆ ಎಂದು ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೈಕ್ ನ್ನು ತಡೆದ ಪೊಲೀಸರು 500 ರೂ. ಕೊಡುವಂತೆ ಕೇಳಿದ್ದಾರೆ. ಸುಮಾರು ಒಂದು ಗಂಟೆವರೆಗೂ ಬೇಡಿದರೂ ಪೊಲೀಸರು ಕರುಣೆ ತೋರಲೇ ಇಲ್ಲ, ಇದರಿಂದ ಬೇಸತ್ತ ಸವಾರ ಬೈಕಿಗೆ ಬೆಂಕಿ ಹಚ್ಚಿ ಓಡಿಹೋದ ಎಂದು ಘಟನೆ ನೋಡಿದವರು ಹೇಳಿದ್ದಾರೆ.
ಆ ವ್ಯಕ್ತಿ ಹೆಸರು ಗೊತ್ತಿಲ್ಲ, ಕಾರು, ಬೈಕ್, ವ್ಯಾನ್ ತಡೆದು ದಂಡ ಹಾಕುವುದೇ ಸಂಚಾರಿ ಪೊಲೀಸರ ಕೆಲಸವಾಗಿದೆ. ಮಾಳ್ವಾ ಮಿಲ್ ಪಾಯಿಂಟ್ ಬಳಿಯೂ ಇದೇ ರೀತಿ ಮೂವರಿಗೆ ಕಿರುಕುಳ ನೀಡಲಾಯಿತು. ಕಾರುಗಳನ್ನು ತಡೆಗಟ್ಟಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನೂತನ ಸಂಚಾರಿ ನಿಯಮ ಅನುಷ್ಠಾನಗೊಳ್ಳದಿದ್ದರೂ ಪೊಲೀಸರು ಸಾವಿರ ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಇಲ್ಲದಿದ್ದರೆ 500 ರೂ. ಲಂಚ ಕೊಟ್ಟರೆ ಸುಮ್ಮನಾಗುತ್ತಾರೆ ಎಂದು ಮತ್ತೊಬ್ಬ ವ್ಯಕ್ತಿ ಆರೋಪಿಸಿದ್ದಾರೆ.
ಬೆಂಕಿಯನ್ನು ನಂದಿಸಿ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ಪರ್ ದೇಶಿಪುರ ಎಸ್ ಹೆಚ್ ಓ ರಾಹುಲ್ ಶರ್ಮಾ ತಿಳಿಸಿದ್ದಾರೆ.
Advertisement