ಜೈಶ್ ಭಯೋತ್ಪಾದಕ ದಾಳಿ ಎಚ್ಚರಿಕೆ: ಜಮ್ಮು-ಕಾಶ್ಮೀರದ ವಾಯುನೆಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ 

ಜಮ್ಮು-ಕಾಶ್ಮೀರದ ಸುತ್ತಮುತ್ತ ಸಂಭಾವ್ಯ ಆತ್ಮಹತ್ಯಾ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆ ಇಲ್ಲಿನ ವಾಯುನೆಲೆಗಳಿಗೆ ಗುಪ್ತಚರ ಇಲಾಖೆಯ ಮಾರ್ಗದರ್ಶನದಂತೆ ಆರೆಂಜ್ ಅಲರ್ಟ್ ಘೋಷಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು-ಕಾಶ್ಮೀರದ ಸುತ್ತಮುತ್ತ ಸಂಭಾವ್ಯ ಆತ್ಮಹತ್ಯಾ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆ ಇಲ್ಲಿನ ವಾಯುನೆಲೆಗಳಿಗೆ ಗುಪ್ತಚರ ಇಲಾಖೆಯ ಮಾರ್ಗದರ್ಶನದಂತೆ ಆರೆಂಜ್ ಅಲರ್ಟ್ ಘೋಷಿಸಿದೆ.


ಸರ್ಕಾರದ ಉನ್ನತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಜಮ್ಮು-ಕಾಶ್ಮೀರ ಸುತ್ತಮುತ್ತ ವಾಯುನೆಲೆಗಳ ಮೇಲೆ ಜೈಶ್ ಇ ಮೊಹಮ್ಮದ್ ಸಂಘಟನೆಯ 8ರಿಂದ 10 ಉಗ್ರಗಾಮಿಗಳು ಸಂಭಾವ್ಯ ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯಿದ್ದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.


ಈ ಹಿನ್ನಲೆಯಲ್ಲಿ ಶ್ರೀನಗರ, ಆವಂತಿಪುರ, ಜಮ್ಮು, ಪಠಾಣ್ ಕೋಟ್,ಹಿಂದನ್ ವಾಯುನೆಲೆಗಳಿಗೆ ಭಯೋತ್ಪಾದಕರ ಚಲನವಲನಗಳನ್ನು ಗಮನಿಸಿಕೊಂಡು ಗುಪ್ತಚರ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.


ಏನಿದು ಆರೆಂಜ್ ಅಲರ್ಟ್: ರೆಡ್ ಅಲರ್ಟ್ ಗಿಂತ ನಂತರದ ಎಚ್ಚರಿಕೆ ಆರೆಂಜ್ ಅಲರ್ಟ್ ಆಗಿದೆ. ಇದನ್ನು ಹೊರಡಿಸಿದರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ವಾಯುನೆಲೆಗಳಲ್ಲಿ ಮತ್ತು ಅವುಗಳ ಸುತ್ತಮುತ್ತ ಸಂಚಾರಕ್ಕೆ, ಚಲನವಲನಗಳಿಗೆ ನಿರ್ಬಂಧ ಹೇರಲಾಗುತ್ತದೆ. ಬೆದರಿಕೆಗಳನ್ನು ಸದೆಬಡಿಯಲು ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಅಧಿಕಾರಿಗಳು ಪರಾಮರ್ಶಿಸುತ್ತಿದ್ದಾರೆ.


ಜಮ್ಮು-ಕಾಶ್ಮೀರದ ಬಾಲಾಕೋಟ್ ಉಗ್ರರ ಶಿಬಿರ ತಾಣ ಮತ್ತೆ ಸಕ್ರಿಯಗೊಂಡಿದೆ. ಗಡಿ ನುಸುಳಿ ಭಯೋತ್ಪಾದಕರು ಪಾಕಿಸ್ತಾನ ಕಡೆಯಿಂದ ಬರಲು ಸಿದ್ಧರಾಗಿದ್ದಾರೆ ಎಂದು ಇತ್ತೀಚೆಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದರು. ಈ ಸಂದರ್ಭದಲ್ಲಿಯೇ ಗುಪ್ತಚರ ಇಲಾಖೆಯ ಆರೆಂಜ್ ಅಲರ್ಟ್ ಘೋಷಣೆಗೆ ಮಹತ್ವ ಸಿಕ್ಕಿದೆ.


ಗುಜರಾತ್ ರಾಜ್ಯದ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಸರ್ ಕ್ರೀಕ್ ಪ್ರದೇಶದಲ್ಲಿ ವಿಶೇಷ ಸೇವಾ ಗುಂಪು(ಎಸ್ಎಸ್ ಜಿ) ಕಮಾಂಡೊಗಳನ್ನು ಪಾಕಿಸ್ತಾನ ನಿಯೋಜಿಸಿದೆ ಎಂದು ಸರ್ಕಾರ ಹೇಳಿತ್ತು. ಕಳೆದೆರಡು ತಿಂಗಳಲ್ಲಿ ಗಡಿಭಾಗದಲ್ಲಿ ಭದ್ರತಾ ಪಡೆಗಳು ಹಲವು ಉಗ್ರರನ್ನು ಕೊಂದುಹಾಕಿದ್ದಲ್ಲದೆ ಹಲವು ಒಳನುಸುಳುವಿಕೆ ಪ್ರಯತ್ನಗಳನ್ನು ನಾಶಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com