ಲಖನೌ: ಸುಲಿಗೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಎಲ್ಎಲ್ಎಂ ವಿದ್ಯಾರ್ಥಿನಿ, ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಕೋರಿ ಜಿಲ್ಲಾ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಮಧ್ಯೆ, ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಐದು ಕೋಟಿ ಹಣ ನೀಡುವಂತೆ ಒತ್ತಾಯಿಸಿ ಚಿನ್ಮಯಾನಂದ್ ಅವರಿಗೆ ಸಂದೇಶ ಕಳುಹಿಸಿದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದೆ.
ನಾನು ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರೂ, ಎಸ್ಐಟಿ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದು ಕಾನೂನು ವಿದ್ಯಾರ್ಥಿನಿ ದೂರಿದ್ದಾರೆ. ಅಲ್ಲದೆ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಎಸ್ಐಟಿ, ನಾನು ದೆಹಲಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾಾರ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ ಮತ್ತು ಈ ಬಗ್ಗೆ ತನಿಖೆಯೂ ನಡೆಸುತ್ತಿಲ್ಲ ಎಂದು ಸಂತ್ರಸ್ತ ಯುವತಿ ಇಂದು ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ದೂರಿದ್ದಾರೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಸಂತ್ರಸ್ತ ಕಾನೂನು ವಿದ್ಯಾರ್ಥಿನಿ, ಮಾಜಿ ಕೇಂದ್ರ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ವಾಪಸ್ ಪಡೆಯಲು 5 ಕೋಟಿ ರೂ. ಹಣ ಕೇಳಿದ್ದರು ಎಂದು ಆರೋಪಿಸಲಾಗಿದೆ.
Advertisement