ಶಿವಪುರಿ: ಕೋವಿಡ್-19 ಎದುರಿಸಿ ಗೆದ್ದು ಬಂದವರೆಡೆಗೆ ಕೆಲವೊಮ್ಮೆ ಸಾಮಾಜದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಈ ಒಂದು ಉದಾಹರಣೆ ಸಾಕ್ಷಿಯಾಗಿದೆ.
ಕೋವಿಡ್-19 ಗೆದ್ದು ಬಂದ ಮಧ್ಯಪ್ರದೇಶದ ಶಿವಪುರಿಯ ನಿವಾಸಿ ದೀಪಕ್ ಶರ್ಮಾ ನೆರೆ ಮನೆಯವರ ನಕಾರಾತ್ಮಕತೆಯಿಂದಾಗಿ ತಮ್ಮ ಮನೆಯನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ತಮಗಾದ ನೋವಿನ ಬಗ್ಗೆ ಮಾತನಾಡಿರುವ ದೀಪಕ್ ಶರ್ಮಾ, ನಮ್ಮ ಸ್ಥೈರ್ಯವನ್ನು ಕುಗ್ಗಿಸುವಂತಹ ಮಾತುಗಳು ನೆರೆಯವರಿಂದ ಕೇಳಿಬಂದವು. ಇಂತಹ ವಾತಾವರಣದಲ್ಲಿ ಹೇಗೆ ತಾನೆ ಬದುಕುವುದಕ್ಕೆ ಸಾಧ್ಯ ಎಂದು ಶರ್ಮಾ ಪ್ರಶ್ನಿಸಿದ್ದಾರೆ.
ಯಾರಾದರೂ ನಮ್ಮ ಮನೆ ಬಳಿ ಬಂದರೆ, ಅಥವಾ ನನ್ನ ಕುಟುಂಬದವರು ನನ್ನ ಬಳಿ ಬಂದರೆ ಅವರಿಗೂ ಕೊರೋನಾ ಹರಡುತ್ತದೆ ಎಂಬ ವದಂತಿ ಹಬ್ಬಿಸಲು ಪ್ರಾರಂಭಿಸಿದರು. ಪರಿಣಾಮ ಹಾಲು ಸರಬರಾಜು ಮಾಡುವ ವ್ಯಕ್ತಿ, ಹಾಲು ಪೂರೈಕೆ ಮಾಡುವುದನ್ನು ನಿಲ್ಲಿಸಿದ. ನನ್ನ ತಾಯಿ ನಡೆದು ಹೋಗುತ್ತಿದ್ದರೆ ಅವರು ನಡೆಯುತ್ತಿರುವ ದಿಕ್ಕಿನಲ್ಲೂ ನಡೆಯಬೇಡಿ ಕೊರೋನಾ ಹರಡುತ್ತದೆ ಎಂಬ ಮಾತುಗಳನ್ನಾಡತೊಡಗಿದರು. ನನ್ನ ತಂದೆಗೆ ನಿಂದನೀಯ ಮಾತುಗಳನ್ನಾಡತೊಡಗಿದರು. ತರಕಾರಿ ಹಾಲು ತರುವ ವರ್ತಕರನ್ನೂ ದೂರ ಓಡಿಸುತ್ತಿದ್ದರು. ನೆರೆಯವರು ಕಿರಿ ಕಿರಿ ಉಂಟುಮಾಡಿದ್ದರ ಪರಿಣಾಮವಾಗಿ ಮನೆಯನ್ನೇ ಮಾರಾಟ ಮಾಡಿದೆವು ಎಂದು ದೀಪಕ್ ಕೋವಿಡ್-19 ನ್ನು ಗೆದ್ದ ಬಳಿಕ ತಮಗೆ ದೊರೆತ ಸಾಮಾಜಿಕ ಪ್ರತಿಕ್ರಿಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Advertisement