ಆಯೋಧ್ಯೆ: ಹಿಂದೂ ಧರ್ಮೀಯರ ದಶಕಗಳ ಕನಸು ನನಸಾಗಿದ್ದು, ಐತಿಹಾಸಿಕ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುಕ್ತವಾಗಿ ಭೂಮಿ ಪೂಜೆ ನೆರವೇರಿಸಿದರು.
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಬಂದಿಳಿದ ಬಳಿಕ ನೇರವಾಗಿ ಹನುಮಾನ್ ಗಡಿ ದೇಗುಲಕ್ಕೆ ಹನುಮಂತನಿಗೆ ಆರತಿ ಮಾಡಿ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ನೇರವಾಗಿ ಭೂಮಿ ಪೂಜಾ ಕಾರ್ಯಕ್ರಮದ ಪ್ರದೇಶಕ್ಕೆ ತೆರಳಿದ ಪ್ರಧಾನಿ ಮೋದಿ ಭೂಮಿ ಪೂಜೆಗೆ ನಿಗದಿಪಡಿಸಿರುವ ಸ್ಥಳದಲ್ಲಿ ಕೈಮುಗಿದ ಕುಳಿತರು. ಈ ವೇಳೆ ಋತ್ವಿಜರಿಂದ ವೇದ ಮಂತ್ರ ಪಠಣ. ರಾಮಾಯಣದ ಕೆಲ ಶ್ಲೋಕಗಳ ಪಾರಾಯಣ ಮಾಡಲಾಯಿತು.
ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿಯಿತು. ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ವಿಧಿಪೂರ್ವಕ ಪೂಜಿಸಲಾಯಿತು. ಈ ಸಂದರ್ಭ ಭಕ್ತರು ರಾಮರಕ್ಷಾಸ್ತೋತ್ರ ಪಠಿಸಿದರು. ಬಳಿಕ ಪ್ರಧಾನಿ ಮೋದಿ ಭೂಮಿಗೆ ಆರತಿ ಮಾಡಿದರು. ಬಳಿಕ ಭೂಮಿ ಪೂಜೆಯ ಪ್ರದೇಶಕ್ಕೆ ಪ್ರಧಾನಿ ಮೋದಿ ಪ್ರದಕ್ಷಿಣೆ ಹಾಕಿದರು.
ಶಿಲಾನ್ಯಾಸಕ್ಕೆ 5 ಇಟ್ಟಿಗೆಗಳ ಮೊದಲೇ ಇಡಲಾಗಿತ್ತು. 22.6 ಕೆಜಿ ತೂಕದ ನಂದಾ, ಭದ್ರಾ, ರಿಕ್ತಾ, ಜಯಾ ಮತ್ತು ಪೂರ್ಣ ಎಂಬ ಹೆಸರಿನ ಬೆಳ್ಳಿ ಇಟ್ಟಿಗೆಗಳನ್ನು ಇಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಸಾಂಕೇತಿಕವಾಗಿ ಮೊದಲೇ ಇಡಲಾಗಿದ್ದ ಈ ಬೆಳ್ಳಿ ಇಟ್ಟಿಗೆಗಳನ್ನು ಮುಟ್ಟಿ ನಮಸ್ಕರಿಸಿ, ಯಜ್ಞ ಕುಂಡದಲ್ಲಿನ ವಿಭೂತಿಯನ್ನು ಹಣೆಗೆ ಹಚ್ಚಿಕೊಂಡು ನಮಸ್ಕರಿಸಿದರು.
ಸಂಕಲ್ಪ ನೆರವೇರಿಸಿದ ಪ್ರಧಾನಿ
ಶಿಲಾನ್ಯಾಸಕ್ಕೂ ಮೊದಲು ದೇಶದ ಜನತೆಯ ಪರವಾಗಿ ಸಂಕಲ್ಪ ನೆರವೇರಿಸಿದರು. 'ದೇಶದ ಸಮಸ್ತ ದೇಶಗಳ ಪ್ರತಿನಿಧಿಯಾಗಿ, ನರೇಂದ್ರ ಮೋದಿ ಹೆಸರಿನ ನಾನು ದೇಶದ ಪ್ರತಿನಿಧಿಯಾಗಿ ಭೂಮಿಪೂಜೆ ಮಾಡುತ್ತೇನೆ. ಕಾಲಕ್ಕೆ ಸರಿಯಾಗಿ ಮಳೆ ಬರಲಿ, ಸಸ್ಯ ಸಂಪತ್ತು ವೃದ್ಧಿಯಾಗಲಿ ಎಂದು ಕೋರಿದರು. ಈ ವೇಳೆ ಋತ್ವಿಜರು ಆಶೀರ್ವಾದ ಮಂತ್ರಗಳ ಪಠಣ ಮಾಡಿದರು.
ಬಳಿಕ ಪ್ರಧಾನಿ ಮೋದಿ ನೇರವಾಗಿ ವೇದಿಕೆಯತ್ತ ನಡೆದರು.
Advertisement