ಲಖೌನೌ: ಅಯೋಧ್ಯೆ ರಾಮ ಮಂದಿರಕ್ಕೆ ಕಬ್ಬಿಣದ ಬದಲಿಗೆ ಭಕ್ತರು ನೀಡುವ ತಾಮ್ರದ ಶೀಟ್ ಗಳನ್ನು ಬಳಸಲಾಗುವುದು ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ವಿಹೆಚ್ ಪಿ ಮುಖಂಡ ಚಂಪತ್ ರೈ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರ ಸಭೆಯ ನಂತರ ಮಾತನಾಡಿದ ಅವರು, ಅಂದಾಜಿನಂತೆ 10 ಸಾವಿರ ತಾಮ್ರದ ಶೀಟ್ ಗಳನ್ನು ರಾಮ ಮಂದಿರ ನಿರ್ಮಿಸಲು ಬಳಸಲಾಗುತ್ತಿದೆ ಎಂದರು.
ಸಭೆಯಲ್ಲಿ ರೂರ್ಕೆ ಮೂಲದ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್ ಮತ್ತು ಮದ್ರಾಸ್ ನ ಐಐಟಿಯಿಂದ ರಾಮ ಜನ್ಮಭೂಮಿ ಆವರಣದಲ್ಲಿನ ಮಣ್ಣನ್ನು ಪರೀಕ್ಷಿಸಲು ಟ್ರಸ್ಟಿಗಳು ನಿರ್ಧರಿಸಿದ್ದು, ಎಲ್ ಅಂಡ್ ಟಿ ಇಂಜಿನಿಯರ್ ಗಳು, ಪರಿಣಿತರು ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಲಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ಮೂರರಿಂದ ಮೂರುವರೆ ವರ್ಷಗಳಲ್ಲಿ ದೇವಾಲಯ ನಿರ್ಮಾಣ ಕಾರ್ಯ ಮುಕ್ತಾಯವಾಗುವ ನಿರೀಕ್ಷೆ ಹೊಂದಲಾಗಿದ್ದು, ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಟ್ವಿಟರ್ ಬಳಸಿಕೊಳ್ಳಲಾಗುತ್ತಿದೆ. ತಾಮ್ರದ ಶೀಟ್ ಗಳು 18 ಇಂಚು ಉದ್ದ 30 ಮೀಟರ್ ಅಗಲ ಹೊಂದಿರಬೇಕಾಗುತ್ತದೆ. ಇಂತಹ 10 ಸಾವಿರ ಶೀಟ್ ಗಳನ್ನು ಬೇಕಾಗಲಿದ್ದು, ಭಕ್ತಾಧಿಗಳು ಟ್ರಸ್ಟ್ ಗಳಿಗೆ ಕೊಡುಗೆಯಾಗಿ ನೀಡಬಹುದಾಗಿದೆ.
ತಾಮ್ರದ ಶೀಟ್ ಗಳನ್ನು ಕೊಡುಗೆಯಾಗಿ ನೀಡಬಯಸುವವರು ಕುಟುಂಬದ ಹೆಸರು, ಹುಟ್ಟಿದ ಸ್ಥಳ, ಅಥವಾ ಅವರ ಸಮುದಾಯದ ದೇವಾಲಯದ ಹೆಸರನ್ನು ಈ ಶೀಟ್ ಗಳ ಮೇಲೆ ಕೆತ್ತಿಸಬಹುದಾಗಿದೆ. ಇದು ದೇಶದ ಏಕತೆ ಸಂದೇಶ ಮಾತ್ರವಲ್ಲದೇ, ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆಯ ಒಡಂಬಡಿಕೆಯಾಗಿದೆ ಎಂದು ಚಂಪತ್ ರೈ ತಿಳಿಸಿದ್ದಾರೆ.
ದೇವಾಲಯ ನಿರ್ಮಾಣಕ್ಕಾಗಿ ಜನರಿಂದ ನಿಧಿ ಸಂಗ್ರಹಕ್ಕಾಗಿ 3 ಲಕ್ಷ ಹಳ್ಳಿಗಳು, 700 ನಗರಗಳಿಗೆ ತಲುಪಲು ವಿಶ್ವ ಹಿಂದೂ ಪರಿಷತ್ ಯೋಜನೆ ಹಾಕಿಕೊಂಡಿರುವಂತೆ,ದೇಣಿಗೆ ನೀಡಬಯಸುವವರಿಗಾಗಿ ಬ್ಯಾಂಕ್ ಖಾತೆ ವಿವರಗಳನ್ನು ಟ್ರಸ್ಟ್ ಟ್ವಿಟ್ ಮಾಡಿದೆ.
ನಾಗರ ಶೈಲಿಯಲ್ಲಿ ಎಲ್ ಅಂಡ್ ಟಿ ಕಂಪನಿ ಈ ದೇವಾಲಯವನ್ನು ನಿರ್ಮಿಸುತ್ತಿದ್ದು, ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳನ್ನು ತಡೆದುಕೊಂಡು 1 ಸಾವಿರ ವರ್ಷ ಅಸ್ತಿತ್ವವಿರುವಂತಹ ದೇವಾಲಯ ಇದಾಗಿದೆ.
Advertisement