ಋತುಸ್ರಾವದ ಕುರಿತು ವಿದ್ಯಾರ್ಥಿನಿಯರ ಒಳಒಡುಪು ಪರೀಕ್ಷಿಸಿದ್ದ ಕಾಲೇಜು ಪ್ರಾಂಶುಪಾಲರ ಅಮಾನತು!
ಅಹ್ಮದಾಬಾದ್: ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ಋತುಸ್ರಾವದ ಕುರಿತು ಒಳಉಡುಪು ಪರೀಕ್ಷೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.
ಋತುಸ್ರಾವವಾಗಿಲ್ಲ ಎಂದು ಖಚಿತಪಡಿಸಲು ಸುಮಾರು 60 ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಶಿಕ್ಷಕರು ಬಲವಂತವಾಗಿ ತೆಗೆಸಿ ಪರೀಕ್ಷೆ ನಡೆಸಿದ್ದ ಅಮಾನವೀಯ ಘಟನೆ ಗುಜರಾತ್ ನ ಭುಜ್ ಎಂಬಲ್ಲಿನ ಶ್ರೀ ಸಹಜಾನಂದ ಮಹಿಳಾ ಕಾಲೇಜಿನಲ್ಲಿ ನಡೆದಿತ್ತು. ಕೆಲ ವಿದ್ಯಾರ್ಥಿನಿಯರು ತಮ್ಮ ಮಾಸಿಕ ದಿನಗಳಂದು ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಹಾಸ್ಟೆಲ್ ಮುಖ್ಯಸ್ಥರು ಪ್ರಾಂಶುಪಾಲರಿಗೆ ದೂರಿದ ನಂತರ ಇಂತಹ ಒಂದು ವಿಪರೀತದ ಕ್ರಮ ಕೈಗೊಳ್ಳಲಾಗಿತ್ತು.
ಈ ಕುರಿತಂತೆ ವಿದ್ಯಾರ್ಥಿನಿಯರ ಪೋಷಕರು ದೂರು ನೀಡಿದ ಬೆನ್ನಲ್ಲೇ ಈ ಸುದ್ದಿ ವ್ಯಾಪಕವಾಗಿ ಹಬ್ಬಿ ಕಾಲೇಜಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಕಾಲೇಜಿನ ಪ್ರಾಂಶುಪಾಲರಾದ ರೀಟಾ ರಾಣಿಂಗರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಐಪಿಸಿ ಸೆಕ್ಷನ್ 384, 355 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ