ನವದೆಹಲಿ:ದೆಹಲಿಯ ಉಪಾರ್ ಸಿನಿಮಾ ಹಾಲ್ ನಲ್ಲಿ 23 ವರ್ಷಗಳ ಹಿಂದೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪಿನ ಮರುಪರಿಶೀಲನೆಗೆ ನಿರಾಕರಿಸಿದ್ದರಿಂದ ಕೈಗಾರಿಕೋದ್ಯಮಿಗಳಾದ ಸುಶಿಲ್ ಮತ್ತು ಗೋಪಾಲ್ ಅನ್ಸಲ್ ಸೋದರರಿಗೆ ಕೇಸಿನಲ್ಲಿ ಬಹಳ ದೊಡ್ಡ ಜಯ ಸಿಕ್ಕಿದ್ದು ಇನ್ನುಳಿದ ವರ್ಷಗಳ ಜೈಲುವಾಸದ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಇಂದು ಕ್ಯುರೇಟಿವ್ ಅರ್ಜಿಯನ್ನು ತಳ್ಳಿಹಾಕಿತು. ಅನ್ಸಲ್ ಸೋದರರ ಶಿಕ್ಷೆಯ ಅವಧಿಯನ್ನು ವಿಸ್ತೃತಗೊಳಿಸಬೇಕೆಂದು ಉಪಾರ್ ದುರಂತಕ್ಕೆ ಬಲಿಯಾದವರ ಕುಟುಂಬಸ್ಥರ ಒಕ್ಕೂಟ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
2015ರಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಸಿನಿಮಾ ಹಾಲ್ ನ ಮಾಲೀಕರಾದ ಅನ್ಸಲ್ ಸೋದರರಿಗೆ 60 ಕೋಟಿ ರೂಪಾಯಿ ದಂಡ ಕಟ್ಟುವಂತೆ ಹೇಳಿ ಜೈಲುಶಿಕ್ಷೆಯಿಂದ ಬಜಾವ್ ಮಾಡಿತ್ತು. ಸುಶಿಲ್ ಅವರಿಗೆ ವಯಸ್ಸಾಗಿದ್ದು ಅವರ ಕಿರಿಯ ಸೋದರ ಕೂಡ ಶಿಕ್ಷೆಯಲ್ಲಿ ಸಮಾನತೆ ಹೊಂದಿದ್ದಾರೆ ಎಂದು ಹೇಳಿತ್ತು. ಸುಶಿಲ್ ಅವರಿಗೆ ಆಗ 75 ವರ್ಷ ಮತ್ತು ಗೋಪಾಲ್ ಗೆ 67 ವರ್ಷವಾಗಿತ್ತು.
ಸಿನಿಮಾ ಹಾಲ್ ಬೆಂಕಿ ಅವಘಡ ಕೇಸಿನಲ್ಲಿ ಅನ್ಸಲ್ ಸೋದರರ ನಿರ್ಲಕ್ಷ್ಯತನವೇ ಕಾರಣ ಎಂದು ಹೇಳಿ ತಲಾ 30 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಹೇಳಲಾಗಿತ್ತು. ಈ ಹಣವನ್ನು ದೆಹಲಿ ಸರ್ಕಾರ ಟ್ರಾಮಾ ಕೇಂದ್ರಗಳ ಸ್ಥಾಪನೆಗೆ ಅಥವಾ ಈಗಿರುವ ಟ್ರಾಮಾ ಕೇಂದ್ರಗಳ ಮೇಲ್ದರ್ಜೆಗೆ ಬಳಸಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿತ್ತು.
ಸಿನಿಮಾ ಹಾಲ್ ಮಾಲೀಕರಾದ ಅನ್ಸಲ್ ಸೋದರರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು 1997ರಿಂದ ಕಾನೂನು ಹೋರಾಟದಲ್ಲಿ ನಾಲ್ಕೈದು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರು.
ಇಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಮತ್ತು ಅರುಣ್ ಮಿಶ್ರಾ ಅವರನ್ನು ಸಹ ಒಳಗೊಂಡ ವಿಭಾಗೀಯ ಪೀಠ, ಕ್ಯುರೇಟಿವ್ ಅರ್ಜಿಯಲ್ಲಿ ಯಾವುದೇ ಅರ್ಹತೆಯಿಲ್ಲ ಎಂದು ಹೇಳಿ ತಳ್ಳಿಹಾಕಿತು. ಅಲ್ಲದೆ ತೆರೆದ ಕೋರ್ಟ್ ನಲ್ಲಿ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸಹ ತಳ್ಳಿಹಾಕಿತು.
ಆದರೂ ಈ ಪ್ರಕರಣದಲ್ಲಿ ಉಳಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಸುಶೀಲ್ ಅನ್ಸಾಲ್ ಕಿರಿಯ ಸಹೋದರ ಗೋಪಾಲ್ ಅನ್ಸಾಲ್ ಗೆ ಆದೇಶಿಸಿದೆ. 23 ವರ್ಷಗಳ ಹಿಂದೆ ಸಂಭವಿಸಿದ ಚಿತ್ರ ಮಂದಿರದ ಅಗ್ನಿ ದುರಂತದಲ್ಲಿ 56 ಜನರು ಮೃತಪಟ್ಟಿದ್ದರು.
Advertisement