ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಗುಂಡಿನ ಚಕಮಕಿ: ಮೂವರು ಉಗ್ರರು ಹತ, ಪೊಲೀಸ್ ಗೆ ಗಾಯ 

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನ್ನ್ ಟೋಲ್ ಪ್ಲಾಜಾ ಬಳಿ ಶುಕ್ರವಾರ ಬೆಳಗ್ಗೆ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಗುಂಡಿನ ಚಕಮಕಿ: ಮೂವರು ಉಗ್ರರು ಹತ, ಪೊಲೀಸ್ ಗೆ ಗಾಯ 

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನ್ನ್ ಟೋಲ್ ಪ್ಲಾಜಾ ಬಳಿ ಶುಕ್ರವಾರ ಬೆಳಗ್ಗೆ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.


ಜಮ್ಮುವಿನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯ ಅಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.


ಇಂದು ಬೆಳಗ್ಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಬನ್ನ್ ಟೋಲ್ ಪ್ಲಾಜಾ ಬಳಿ ಶ್ರೀನಗರಕ್ಕೆ ಹೋಗುತ್ತಿದ್ದ ಟ್ರಕ್ ನ್ನು ಪೊಲೀಸರು ತಪಾಸಣೆ ಮಾಡಲೆಂದು ನಿಲ್ಲಿಸಿದರು. ಅದರಲ್ಲಿ ಪ್ರಯಾಣಿಸುತ್ತಿದ್ದ ಉಗ್ರ ಪೊಲೀಸರೆಡೆಗೆ ಏಕಾಏಕಿ ಗುಂಡಿನ ದಾಳಿ ಮಾಡಲಾರಂಭಿಸಿದ. ಅದಕ್ಕೆ ಪ್ರತಿಯಾಗಿ ಪೊಲೀಸರು ಸಹ ಪ್ರತಿದಾಳಿ ನಡೆಸಿದರು.


ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಓರ್ವ ಪೊಲೀಸ್ ಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಇನ್ನು ಈ ದಾಳಿ ವೇಳೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಉಗ್ರರು ತಪ್ಪಿಸಿಕೊಂಡು ಪಕ್ಕದ ಪ್ರದೇಶಗಳಲ್ಲಿ ಪರಾರಿಯಾಗಿದ್ದಾರೆ. 


ಈ ಶೂಟೌಟ್ ಘಟನೆ ಆದ ಕೂಡಲೇ ಪೊಲೀಸರು, ಸಿಆರ್ ಪಿಎಫ್ ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ. ಭದ್ರತಾ ಪಡೆ ಯೋಧರು ಸುತ್ತಮುತ್ತಲ ಸ್ಥಳದಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. 


ಉಗ್ರರು ಇತ್ತೀಚೆಗೆ ಜಮ್ಮುವಿನೊಳಗೆ ಒಳನುಸುಳಿ ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com