ನವದೆಹಲಿ: ದೇಶಾದ್ಯಂತ ಕೋವಿಡ್-19 ಸೋಂಕಿನದ್ದು ಸಮಸ್ಯೆಯ ಒಂದು ಭಾಗವಾದರೆ, ಅದರಿಂದ ಚೇತರಿಸಿಕೊಂಡವರು ಸಮಾಜದಿಂದ ಎದುರಿಸಿದ ಕಳಂಕದ ಭಾವನೆಗಳದ್ದು ಸಮಸ್ಯೆಯ ಮತ್ತೊಂದು ಭಾಗ.
ಆದರೆ ಕೋವಿಡ್-19 ಚೇತರಿಕೆಯ ಹೊರತಾಗಿಯೂ ಎದುರಾಗುವ ಸಾಮಾಜಿಕ ಕಳಂಕವನ್ನು ದೆಹಲಿಯ ರೋಹಿತ್ ದತ್ತ ಎಂಬುವವರು ಸಾಮಾಜಿಕ ಕಳಂಕವನ್ನು ಸಮರ್ಥವಾಗಿ ಎದುರಿಸಿ ತಮ್ಮಂತೆಯೇ ಕೋವಿಡ್-19 ಗೆದ್ದ ಅನೇಕರಿಗೆ ಮಾದರಿಯಾಗಿದ್ದಾರೆ. ಅಂದಹಾಗೆ ರೋಹಿತ್ ದತ್ತಾ ಕೊರೋನಾದಿಂದ ಚೇತರಿಕೆ ಕಂಡು ಹತ್ತಿರ ಹತ್ತಿರ ನಾಲ್ಕು ತಿಂಗಳಾಗಿವೆ. ಆದರೆ ಕೋವಿಡ್-19 ಕಾರಣದಿಂದಾಗಿ ಅವರನ್ನು ಮೂದಲಿಸುವ, ತಮಾಷೆ ಮಾಡುವ, ಕುಹಕವಾಡುವ ಸಮಾಜದ ಎಂದಿನ ಮನಸ್ಥಿತಿ ಈ ಕ್ಷಣಕ್ಕೂ ಬದಲಾಗಿಲ್ಲ!.
ದೆಹಲಿಯ ಮಯೂರ್ ವಿಹಾರ್ II ನಲ್ಲಿ ವಾಸಿಸುವ 45 ವರ್ಷದ ರೋಹಿತ್ ದತ್ತ ಫೆ.22 ರಂದು ಇಟಾಲಿಯಿಂದ ಭಾರತಕ್ಕೆ ವಾಪಸ್ಸಾಗಿ ಕೋವಿಡ್-19 ಸೋಂಕು ದೃಢಪಡುವುದಕ್ಕೂ ಮುನ್ನ ಹಲವಾರು ಮಂದಿಯನ್ನು ಭೇಟಿ ಮಾಡಿ ಮಾತನಾಡಿಸಿದ್ದರು. ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಾ.2 ರಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿ ಮಾ.15 ರಂದು ಸಫ್ತರ್ಜಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಚೇತರಿಕೆ ಕಂಡರೂ ಸಹ ಇಂದಿಗೂ ದೆಹಲಿಯ ಕೊರೋನಾ ವೈರಸ್ ಪೇಷೆಂಟ್ ಝಿರೋ ಎಂಬ ಹಣೆಪಟ್ಟಿಯನ್ನು ಹೊತ್ತಿದ್ದಾರೆ.
ಕೋವಿಡ್-19 ನಿಂದ ಚೇತರಿಕೆ ಕಂಡವರನ್ನು ಸಮಾಜ ನಡೆಸಿಕೊಳ್ಳುವುದರ ಬಗ್ಗೆ ತಮ್ಮ ಅನುಭವ ಹಾಗೂ ತಾವು ಅದಕ್ಕೆ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಸ್ವತಃ ರೋಹಿತ್ ದತ್ತ ಮಾತನಾಡಿದ್ದು, ಕಳಂಕ ಜೀವನದ ಒಂದು ಭಾಗ, ನೀವು ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ನನ್ನನ್ನು ಭೇಟಿ ಮಾಡಿದ ಜನರು "ರೋಹಿತ್ ನೀನು ಭಾರತದ ಆರ್ಥಿಕತೆಯನ್ನೇ ಹಾಳುಗೆಡವಿದೆ, ನೀನು ನಮ್ಮ ಮೇಲೆ ಸೇಡು ತೀರಿಸಿಕೊಂಡೆ" ಎಂದೆಲ್ಲಾ ವಿಡಂಬನಾತ್ಮಕವಾಗಿ ಮಾತನಾಡುತ್ತಾರೆ. ಆದರೆ ಉದ್ದೇಶಪೂರ್ವಕವಾಗಿ ತಾರತಮ್ಯ ಮನೋಭಾವದಿಂದ ಅಥವಾ ಕೋವಿಡ್-19 ಸೋಂಕು ಬಂದಿದ್ದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂಬ ಭಾವ ಆ ಮಾತುಗಳಲ್ಲಿ ವ್ಯಕ್ತವಾಗುವುದಿಲ್ಲ.
ಜನರು ಹಾಗೆ ಮಾತನಾಡಿದಾಗಾಲೆಲ್ಲಾ, ನಾನು ಸಣ್ಣ ನಗುವಿನೊಂದಿಗೆ "ನೀನು ನನ್ನ ಶತ್ರು ಅದಕ್ಕೇ ಸೇಡು ತೀರಿಸಿಕೊಂಡೆ" ಎಂದು ಹೇಳುತ್ತೇನೆ. "ನನ್ನ ಅವಧಿಯಲ್ಲಿ ಸಾಕಷ್ಟು ಕಳಂಕಗಳು ವ್ಯಕ್ತವಾಗುತ್ತಿದ್ದವು. ಆದರೆ ಅದು ಯಾರ ತಪ್ಪೂ ಅಲ್ಲ. ಕೋವಿಡ್-19 ಹೇಗೆ ಹರಡುತ್ತಿದೆ ಎಂಬುದರ ಬಗ್ಗೆ ಯಾರಿಗೂ ಆಗ ಸರಿಯಾದ ಮಾಹಿತಿ ಇರಲಿಲ್ಲ. ಪ್ರಾರಂಭದಲ್ಲಿ ಯಾವುದೂ ಸ್ಪಷ್ಟವಾಗಿರಲಿಲ್ಲ. ಈಗ ಜನರಿಗೆ ಸಾಕಷ್ಟು ತಿಳಿದಿದೆ. ಕೋವಿಡ್-19 ಹರಡದಂತೆ ಏನು ಮಾಡಬೇಕೆಂಬುದೂ ಗೊತ್ತಿದೆ" ಎನ್ನುತ್ತಾರೆ ರೋಹಿತ್ ದತ್ತ
"ನಾನು ಭೇಟಿ ಮಾಡಿದ್ದ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಸೋಂಕು ದೃಢಪಡಬಾರದು ಎಂಬುದಷ್ಟೇ ನನ್ನ ಬಯಕೆಯಾಗಿತ್ತು. ಈಗ ಅವರೆಲ್ಲರಿಗೂ ಕೋವಿಡ್-19 ನೆಗೆಟೀವ್ ವರದಿ ಬಂದಿದೆ ಎಂದು ರೋಹಿತ್ ದತ್ತ ಹೇಳಿದ್ದಾರೆ.
ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರ ಬಗ್ಗೆಯೂ ಮಾತನಾಡಿರುವ ಅವರು "ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿದ್ದು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆ ನೀಡಿದ್ದಾರೆ.
Advertisement