ಚೆನ್ನೈ: ಪದ್ಮಭೂಷಣ ಪ್ರಶಸ್ತಿ ವಿಜೇತ ಗಣಿತಜ್ಞ ಸಿಎಸ್ ಶೇಷಾದ್ರಿ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ "ಸಿಎಸ್ ಶೇಷಾದ್ರಿ ಅವರು ಬೀಜಗಣಿತೀಯ ರೇಖಾಗಣಿತ (ಆಲ್ಜೀಬ್ರಾಯಿಕ್ ಜ್ಯಾಮಿಟ್ರಿ) ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಮುಂದಿನ ಪೀಳಿಗೆಗಳು ನೆನಪಿಡಲಿವೆ ಎಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪ್ರೊಫೆಸರ್ ಸಿಎಸ್ ಶೇಷಾದ್ರಿ ಅವರ ನಿಧನದಿಂದಾಗಿ, ಗಣಿತ ಕ್ಷೇತ್ರದಲ್ಲಿ ಅನನ್ಯ ಕೆಲಸಗಳನ್ನು ಮಾಡಿರುವ ಬೌದ್ಧಿಕ ಅಗ್ರಮಾನ್ಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ, ಅವರ ಕುಟುಂಬ ಹಾಗೂ ಅನುಯಾಯಿಗಳಿಗೆ ಶೇಷಾದ್ರಿ ಅವರ ಸಾವಿನ ಹಿನ್ನೆಲೆಯಲ್ಲಿ ಸಂತಾಪ ತಿಳಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯೋತ್ತರ ಭಾರತದ ಗಣಿತಜ್ಞರ ಪೈಕಿ ಅಗ್ರಮಾನ್ಯರಾಗಿರುವ ಶೇಷಾದ್ರಿ ಚೆನ್ನೈ ನ ನಿವಾಸದಲ್ಲಿ ನಿಧನರಾಗಿದ್ದಾರೆ.
ಶೇಷಾದ್ರಿಯವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಮೊದಲು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು 1985 ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಗೆ ಸೇರ್ಪಡೆಯಾಗಿದ್ದರು. 1989 ರಲ್ಲಿ ಎಸ್ ಪಿಐಸಿ ಸೈನ್ಸ್ ಫೌಂಡೇಶನ್ ನ ಭಾಗವಾಗಿ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್ ಈಗಿನ ಚೆನ್ನೈ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಲು ಅವಕಾಶ ದೊರೆತಿತ್ತು.
1988 ರಲ್ಲಿ ಶೇಷಾದ್ರಿ ಅವರು ರಾಯಲ್ ಸೊಸೈಟಿಗೆ ನೇಮಕ ಮಾಡಲ್ಪಟ್ಟಿದ್ದರು. ಇದಾದ ಬಳಿಕ 2010 ರಲ್ಲಿ ಅಮೆರಿಕಾದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ಗೆ ಫಾರಿನ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಿದ್ದರು. 2009 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
Advertisement