ರಾಜಸ್ತಾನ ಆಡಿಯೊ ಟೇಪ್ ಆರೋಪ:ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ
ಜೈಪುರ: ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದ್ದರು ಎನ್ನಲಾದ ಆಡಿಯೊ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದಾಖಲಿಸಿರುವ ಕೇಸಿನ ಬಗ್ಗೆ ತನಿಖೆ ನಡೆಸಲು ರಾಜಸ್ತಾನ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ರಾಥೋಡ್ ಅಪರಾಧ ವಿಭಾಗದ ಎಸ್ಪಿ ಸಿಐಡಿ ವಿಕಾಸ್ ಶರ್ಮ ನೇತೃತ್ವದಲ್ಲಿ 8 ಸದಸ್ಯರ ತಂಡವನ್ನು ರಚಿಸಿದ್ದಾರೆ. ಈ ತಂಡ ಕಾಂಗ್ರೆಸ್ ಮೊನ್ನೆ ಆಡಿಯೊ ಟೇಪ್ ಗೆ ಸಂಬಂಧಿಸಿದಂತೆ ದಾಖಲಿಸಿರುವ ಎರಡು ಎಫ್ ಐಆರ್ ಬಗ್ಗೆ ತನಿಖೆ ನಡೆಸಲಿದೆ.
ರಾಜಸ್ತಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು(ಎಸ್ಒಜಿ) ಈಗಾಗಲೇ ಆಡಿಯೊ ಟೇಪ್ ಪ್ರಕರಣಕ್ಕೆ ಸಂಬಂಧಿಸಿ ಸಂಜಯ್ ಶರ್ಮ ಅವರನ್ನು ಬಂಧಿಸಿದ್ದು ಪ್ರಸ್ತುತ ಪೊಲೀಸ್ ರಿಮಾಂಡ್ ನಲ್ಲಿದ್ದಾರೆ.
ಕಾಂಗ್ರೆಸ್ ದಾಖಲಿಸಿರುವ ಎಫ್ಐಆರ್ ನಲ್ಲಿ ಬಂಡಾಯ ಶಾಸಕರಾದ ಬನ್ವರ್ ಲಾಲ್ ಶರ್ಮ ಮತ್ತು ಗಜೇಂದ್ರ ಸಿಂಗ್, ಸಂಜಯ್ ಜೈನ್ ಅವರ ಹೆಸರುಗಳನ್ನು ನಮೂದಿಸಿದ್ದು ಕುದುರೆ ವ್ಯಾಪಾರ ಮೂಲಕ ಶಾಸಕರನ್ನು ಖರೀದಿಸಿ ಸರ್ಕಾರವನ್ನು ಉರುಳಿಸಲು ಭಾರೀ ಪಿತೂರಿ ನಡೆಸಿದ್ದರು ಎಂದು ಆಪಾದಿಸಲಾಗಿದೆ. ಇದಕ್ಕೆ ಪುಷ್ಠಿ ನೀಡುವ ಆಡಿಯೊ ಟೇಪನ್ನು ಸಹ ಕಾಂಗ್ರೆಸ್ ಪೊಲೀಸರಿಗೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ