ಕೋಲ್ಕತಾ: ನಾನು ಬಿಜೆಪಿಯಲ್ಲೇ ಇದ್ದೇನೆ ಮತ್ತು ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ ಎಂದಿರುವ ಬಿಜೆಪಿ ಹಿರಿಯ ನಾಯಕ ಮುಕುಲ್ ರಾಯ್ ಅವರು, ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಇದೆ ಎಂಬ ವರದಿಗಳು ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವಂತಹದ್ದು ಎಂದು ಭಾನುವಾರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಯ್, ನಾನು ಮತ್ತೆ ತೃಣಮೂಲ ಕಾಂಗ್ರೆಸ್ ಸೇರುತ್ತೇನೆ ಎಂಬ ವದಂತಿಗಳಿಂದ ನೋವಾಗಿದೆ. ನಾನು ಬಿಜೆಪಿಯಲ್ಲೇ ಇದ್ದೇನೆ ಮತ್ತು ಬಿಜೆಪಿಯಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಪ್ರಚಾರದ ಮೇಲ್ವಿಚಾರಣೆ ನಡೆಸಲು ಬಿಜೆಪಿ ನನಗೆ ಸಂಪೂರ್ಣ ಜವಾಬ್ದಾರಿ ನೀಡಿತ್ತು. ಕೇಂದ್ರ ನಾಯಕತ್ವ ನನಗೆ ಎಲ್ಲ ಗೌರವ ಮತ್ತು ಮನ್ನಣೆ ನೀಡಿದೆ. ನಾನು ಯಾಕೆ ನಿರಾಶೆಗೊಳ್ಳಬೇಕು? ಎಂದು ರಾಯ್ ಪ್ರಶ್ನಿಸಿದ್ದಾರೆ.
ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಯ್, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.
Advertisement