ಗಲ್ವಾನ್ ಸಂಘರ್ಷ: 'ಪಿಟಿಐ ದೇಶ ವಿರೋಧಿ', ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ ಪ್ರಸಾರ ಭಾರತಿ

ದೇಶದ ಪ್ರಮುಖ ಸುದ್ದಿ ಸಂಸ್ಛೆ ಪಿಟಿಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ)ವನ್ನು ದೇಶ ವಿರೋಧಿ ಎಂದು ಟೀಕಿಸಿರುವ ಪ್ರಸಾರ ಭಾರತಿ ನಿಮ್ಮೊಂದಿಗಿನ ಎಲ್ಲ ರೀತಿಯ ವ್ಯವಹಾರವನ್ನು ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ದೇಶದ ಪ್ರಮುಖ ಸುದ್ದಿ ಸಂಸ್ಛೆ ಪಿಟಿಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ)ವನ್ನು ದೇಶ ವಿರೋಧಿ ಎಂದು ಟೀಕಿಸಿರುವ ಪ್ರಸಾರ ಭಾರತಿ ನಿಮ್ಮೊಂದಿಗಿನ ಎಲ್ಲ ರೀತಿಯ ವ್ಯವಹಾರವನ್ನು ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸಿರುವಾಗಲೇ ಪಿಟಿಐ ಸುದ್ದಿ ಸಂಸ್ಥೆ ಚೀನಾ ರಾಯಭಾರಿ ಸನ್ ವೇಯ್ಡಾಂಗ್ ಅವರ ಸಂದರ್ಶನ ಪಡೆದಿತ್ತು. ಆ ಸಂದರ್ಶನದಲ್ಲಿ ಭಾರತವನ್ನು ಟೀಕಿಸಿದ್ದ ರಾಯಭಾರಿಯ ಹೇಳಿಕೆಗಳನ್ನು ಪ್ರಕಟಿಸಲಾಗಿತ್ತು. ಪಿಟಿಐನ ಈ ನಡೆಯನ್ನು ವಿರೋಧಿಸಿರುವ ಪ್ರಸಾರ ಭಾರತಿ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ಅನ್ನು ದೇಶ ವಿರೋಧಿ ಎಂದು ಟೀಕಿಸಿದೆ. ಅಲ್ಲದೆ ಪಿಟಿಐ ಜೊತೆಗಿನ ಎಲ್ಲ ರೀತಿಯ ವ್ಯವಹಾರವನ್ನು ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಪ್ರಸಾರ ಭಾರತಿಯು ಪಿಟಿಐ ಸುದ್ದಿಸಂಸ್ಥೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ಪಿಟಿಐ ನಡೆಸಿದ್ದ ಸಂದರ್ಶನದ ವಿರುದ್ಧ ತೀವ್ರ ಅಸಮಾದಾನ ಹೊರಹಾಕಿದೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಪಿಟಿಐ ಸಂಪಾದಕೀಯ ವರ್ಗದೊಂದಿಗೆ ಪ್ರಸಾರ ಭಾರತಿ ಅಧಿಕಾರಿಗಳು ಮಾತನಾಡಿದ್ದು, ಪಿಟಿಐ ಸಂದರ್ಶವನ್ನು ದೇಶ ವಿರೋಧಿ ವರದಿಗಾರಿಕೆ ಎಂದು ಟೀಕಿಸಿದೆ. ಜೂನ್ 25ರಂದು ಪ್ರಸಾರವಾಗಿದ್ದ ಸಂದರ್ಶನದಲ್ಲಿ ಚೀನಾ ರಾಯಭಾರಿ ಗಲ್ವಾನ್ ಸಂಘರ್ಷಕ್ಕೆ ಭಾರತವೇ ಕಾರಣ. ಸಂಘರ್ಷದಲ್ಲಿ ಚೀನಾ ತಪ್ಪೇ ಇಲ್ಲ ಎನ್ನುವಂತೆ ಹೇಳಿದ್ದರು. ಈ ಸಂದರ್ಶನವನ್ನು ಪ್ರಸಾರ ಮಾಡುವ ಮೂಲಕ ಪಿಟಿಐ ಪರೋಕ್ಷವಾಗಿ ಚೀನಾ ನಡೆಯನ್ನು ಬೆಂಬಲಿಸಿತ್ತು ಎಂದು ಪ್ರಸಾರ ಭಾರತಿ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.


ಇನ್ನು ಚೀನಾ ರಾಯಭಾರಿ ಈ ಸಂದರ್ಶನದ ಬೆನ್ನಲ್ಲೇ ಟ್ವೀಟ್ ಮಾಡಿ, ಸಂಘರ್ಷದಲ್ಲಿ ಚೀನಾ ಪಾತ್ರವಿಲ್ಲ. ಸಂಘರ್ಷದ ಸಂಪೂರ್ಣ ಹೊಣೆ ಭಾರತದ್ದು. ಈಗಲೂ ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ ಎಂದು ಹೇಳಿ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. 

ಇನ್ನು ಸರ್ಕಾರಿ ಮೂಲಗಳು ತಿಳಿರುವಂತೆ ಪಿಟಿಐ ಸುದ್ದಿ ಸಂಸ್ಥೆ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯಿಂದ ಸಾಕಷ್ಟು ಪ್ರಮಾಣದ ಆರ್ಥಿಕ ನೆರವು ಪಡೆಯುತ್ತಿತ್ತು ಎನ್ನಲಾಗಿದೆ. ದಶಕಗಳಿಂದಲೂ ಪ್ರಸಾರ ಭಾರತಿ ಪಿಟಿಐಗೆ ಕೋಟ್ಯಂತರು ರೂ ಆರ್ಥಿಕ ನೆರವು ನೀಡುತ್ತಾ ಬಂದಿದೆ ಎನ್ನಲಾಗಿದೆ. ಕೇವಲ ಗಲ್ವಾನ್ ಸಂಘರ್ಷ ಮಾತ್ರವಲ್ಲದೇ ಪಿಟಿಐನ ಇತರೆ ಕಾರ್ಯವೈಖರಿಯೂ ಪ್ರಸಾರಭಾರತಿಗೆ ಇರುಸುಮುರುಸು ಉಂಟು ಮಾಡಿತ್ತು ಎನ್ನಲಾಗಿದೆ. ಈ ಹಿಂದೆ ಇದೇ ಪಿಟಿಐ ಸಂಸ್ಥೆ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಸಮಾಧಾನ ವ್ಯಕ್ತಪಡಿಸಿದ್ದರು. ಗುಜರಾತ್ ಪ್ರವಾಹ ಸಂದರ್ಭದಲ್ಲಿ ಪಿಟಿಐ ಬೇರೆ ಯಾವುದೋ ಫೋಟೋ ಬಿತ್ತರಿಸಿ ಅಹ್ಮದಾಬಾದ್ ಏರ್ ಪೋರ್ಟ್ ಎಂದು ಹೇಳಿತ್ತು. ಬಳಿಕ ಕ್ಷಮೆ ಕೂಡ ಕೇಳಿತ್ತು. 

ಬಳಿಕ ಸ್ನೇಹಿತರ ದಿನಾಚರಣೆ ಹಿನ್ನಲೆಯಲ್ಲಿ ಬಿಜೆಪಿ-ಜೆಡಿಯು ಕಾರ್ಯಕರ್ತರು ಮೋದಿ-ನಿತೀಶ್ ಕುಮಾರ್ ಮುಖವಾಡ ಧರಿಸಿದ್ದ ಫೋಟೋ ಹಾಕಿತ್ತು. ಈ ಬಗ್ಗೆ ಇರಾನಿ ಪಿಟಿಐ ವಿರುದ್ಧ ಕಿಡಿಕಾರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com