ನವದೆಹಲಿ: ಭಾರತದಲ್ಲೂ ಕರೋನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತ ತುರ್ತು ಪರಿಸ್ಥಿತಿಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಸಾಮಾಜಿಕ ಖಾತೆಯೊಂದಿಗಿನ ತಮಾಷೆಯ ಆಟ ಬಿಟ್ಟು, ಕರೋನಾ ವೈರಸ್ ನೊಂದಿಗೆ ವ್ಯವಹರಿಸಿ ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸೇರಿದಂತೆ ದೇಶದಲ್ಲಿ ಎರಡು ಕರೋನಾ ವೈರಸ್ ಪತ್ತೆ ಪ್ರಕರಣ ವರದಿಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಖಾತೆಯೊಂದಿಗೆ ಕೋಡಂಗಿ ಆಟವನ್ನು ಬಿಟ್ಟು, ಕರೋನಾ ವೈರಸ್ ಸವಾಲನ್ನು ಬಗೆಹರಿಸುವ ನಿಟ್ಟನಲ್ಲಿ ಗಮನ ಹರಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕರೋನಾ ವೈರಸ್ ಬಗ್ಗೆ ಹೇಗೆ ಮುಂಜಾಗ್ರತೆ ವಹಿಸಬೇಕೆಂಬ ಬಗ್ಗೆ ಸಿಂಗಾಪುರ ಪ್ರಧಾನಿ ಲೀ ಸಿಯಾನ್ ಲೂಂಗ್ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಜೊತೆಗೆ ಹೇಗೆ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಎಂಬ ಸಂದೇಶವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಭಾನುವಾರ ಸಾಮಾಜಿಕ ಮಾಧ್ಯಮಗಳ ಬಳಕೆ ಮಾಡದಿರಲು ಯೋಚಿಸುತ್ತಿರುವುದಾಗಿ ಹೇಳಿರುವ ಪ್ರಧಾನಿ ಮೋದಿ ಅವರನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನಿಜವಾದ ನಾಯಕರು ದೇಶದಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಸೋಂಕು ಹಾಗೂ ಅದರ ಆರ್ಥಿಕತೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕವೇ ಆರೋಪಿಸಿದ್ದರು.
Advertisement