ಬೆಂಗಳೂರು: ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಧ್ಯ ಪ್ರದೇಶ ಸರ್ಕಾರದಲ್ಲಿ ರಾಜೀನಾಮೆ ನೀಡಿದ್ದ 22 ಕಾಂಗ್ರೆಸ್ ಶಾಸಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿಂಧಿಯಾ ಅವರೇ ನಮ್ಮ ನಾಯಕರಾಗಿದ್ದು ಅವರ ಜೊತೆಯೇ ಯಾವಾಗಲೂ ಇರುತ್ತೇವೆ ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಂಡಾಯ ಕಾಂಗ್ರೆಸ್ ಶಾಸಕ ಇಮರ್ತಿ ದೇವಿ, ಜ್ಯೋತಿರಾದಿತ್ಯ ಸಿಂಧಿಯಾ ನಮ್ಮ ನಾಯಕರು. ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಬಾವಿಗೆ ಬೀಳು ಎಂದು ಸಿಂಧಿಯಾ ಅವರು ಹೇಳಿದರೂ ಅವರ ಜೊತೆಯೇ ನಾವು ಇರುತ್ತೇವೆ ಎಂದರು.
ಮತ್ತೊಬ್ಬ ಬಂಡಾಯ ಶಾಸಕ ಗೋವಿಂದ್ ಸಿಂಗ್ ರಜಪೂತ್, ಮುಖ್ಯಮಂತ್ರಿ ಕಮಲ್ ನಾಥ್ ಅವರು 15 ನಿಮಿಷ ಕೂಡ ನಮ್ಮ ಮಾತು ಕೇಳಿಲ್ಲ. ಹಾಗಾದರೆ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ನಾವು ಯಾರಲ್ಲಿ ಹೇಳಿಕೊಳ್ಳಬೇಕು ಎಂದರು.
ಸಚಿವರಾದ ನಂತರ ನಮಗೆ ಶಾಂತಿಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಾವು ಸುರಕ್ಷಿತವಾಗಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಗುರಿಯಾಗಿಟ್ಟುಕೊಂಡರೆ ನಮ್ಮನ್ನು ಕೂಡ ಗುರಿಯಾಗಿಡುತ್ತಾರೆ. ನಮಗೆ ಭದ್ರತೆ ಬೇಕು. ಜೈಪುರದಲ್ಲಿರುವ ಶಾಸಕರು ಕೂಡ ಅತೃಪ್ತರಾಗಿದ್ದಾರೆ ಎಂದರು.
ಮಧ್ಯ ಪ್ರದೇಶಕ್ಕೆ ಹೋದ ನಂತರ ಬಿಜೆಪಿ ಸೇರುವ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. 6 ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿದ ನಂತರ ನಮ್ಮ ರಾಜೀನಾಮೆಯನ್ನು ಏಕೆ ಸ್ವೀಕರಿಸಿಲ್ಲ ಎಂದು ಕೋರ್ಟ್ ನಲ್ಲಿ ಕೂಡ ಪ್ರಶ್ನೆ ಮಾಡಿದ್ದೇವೆ ಎಂದು ಶಾಸಕ ತುಲ್ಸಿ ಸಿಲಾವತ್ ಹೇಳಿದರು.
Advertisement