ನವದೆಹಲಿ: ಕೋವಿಡ್-19, ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಮಾಯಣ ಪಾಠಗಳನ್ನು ಆಯೋಜಿಸಿದ್ದ ಜೆಎನ್ ಯು ಈಗ ಭಗವದ್ಗೀತೆ ಕುರಿತು ವೆಬಿನಾರ್ ಆಯೋಜನೆ ಮಾಡಿದೆ.
ವಿಶ್ವವಿದ್ಯಾನಿಲಯದ ಉಪಕುಲಪತಿ ಜಗದೀಶ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಕೊರೋನಾ ವೈರಸ್ ಸಂದರ್ಭದಲ್ಲಿ ಒಕ್ಲಹೋಮ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸುಭಾಷ್ ಕಾಕ್ ಭಗವದ್ಗೀತೆ ಕುರಿತ ತರಗತಿಗಳನ್ನು ನಡೆಸಲಿದ್ದಾರೆ ಎಂದು ಟ್ವೀಟ್ ಮಾಡಲಿದ್ದಾರೆ.
ಅಮೆರಿಕದ ಓಕ್ಲಹಾಮ್ ಸ್ಟೇಟ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿರುವ ಸುಭಾಷ್ ಕಾಕ್ 2018 ರಿಂದ ಭಾರತದ ಪ್ರಧಾನಿಗಳ ಅಧೀನದ ವಿಜ್ಞಾನ ತಂತ್ರಜ್ಞಾನ ಹಾಗೂ ನಾವಿನ್ಯ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. 2019 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ.
ಜೆಎನ್ ಯು ವಿವಿಯಲ್ಲಿ ಪ್ರೊ.ಕಾಕ್ ಗೌರವ ಸಂದರ್ಶಕ ಪ್ರೊಫೆಸರ್ ಆಗಿದ್ದು, ಕೋವಿಡ್-19 ರಿಂದ ಉಂಟಾಗಿರುವ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪಾಠ ಮಾಡಲಿದ್ದಾರೆ. ಇದೇ ವೇಳೆ ಭಗವದ್ಗೀತೆ ಕುರಿತ ಪಾಠಗಳನ್ನೂ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ ಎಂದು ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
Advertisement