ನವದೆಹಲಿ: ವೈಜಾಗ್ ಗ್ಯಾಸ್ ದುರಂತ ನಡೆದಿದ್ದ ಗ್ಯಾಸ್ ದುರಂತ ಪ್ರಕರಣದಲ್ಲಿ ಎಲ್ ಜಿ ಪಾಲಿಮರ್ಸ್ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ರೂಪಾಯಿ ದಂಡ ವಿಧಿಸಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್ ಜಿಟಿ ಮುಖ್ಯಸ್ಥ ನ್ಯಾ. ಆದರ್ಶ್ ಕುಮಾರ್ ಗೋಯಲ್ ಅವರಿದ್ದ ಪೀಠ ಮೇ.08 ರಂದು ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಮೇಲ್ನೋಟಕ್ಕೆ ಗೋಚರಿಸಿರುವ ಜೀವಹಾನಿ, ಸಾರ್ವಜನಿಕ ಆರೋಗ್ಯ, ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗಮನಿಸಿ ಎಲ್ ಜಿ ಪಾಲಿಮರ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ 50 ಕೋಟಿ ರೂಪಾಯಿ ಠೇವಣಿ ಇಡಲು ಸೂಚಿಸಲಾಗಿದೆ ಎಂದು ನ್ಯಾಯಾಧಿಕರಣ ಹೇಳಿದೆ.
ಉಂಟಾಗಿರುವ ನಷ್ಟದ ಹಾನಿ, ಸಂಸ್ಥೆಯ ಮೊತ್ತ ಎಲ್ಲವನ್ನೂ ಪರಿಗಣಿಸಿ 50 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಎನ್ ಜಿಟಿ ಹೇಳಿದೆ. ಇದೇ ವೇಳೆ ಕೇಂದ್ರ ಸರ್ಕಾರ, ಅರಣ್ಯ, ಪರಿಸರ ಸಚಿವಾಲಯ, ಎಲ್ ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರಪ್ರದೇಶ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖಪಟ್ಟಣಂ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನೊಟೀಸ್ ಜಾರಿ ಮಾಡಿದ್ದು ಮೇ.18 ರ ಒಳಗೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಿದೆ.
Advertisement