ವಿಶಾಖಪಟ್ಣಂ: ಕಳೆದ ಗುರುವಾರ ನಸುಕಿನ ಜಾವ ವಿಶಾಖಪಟ್ಣಂನ ವೆಂಕಟಾಪುರಂನ ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಅನಿಲ ಸೋರಿಕೆಯಾಗಿ ಸಂಭವಿಸಿದ ದುರ್ಘಟನೆ ಎಲ್ಲರನ್ನೂ ತೀವ್ರ ಆತಂಕಕ್ಕೆ ತಂದೊಡ್ಡಿತ್ತು. ದುರ್ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದರು.
ಸ್ಟೈರೀನ್ ಹೊಗೆ ಸೇವಿಸಿದ್ದು ಜನರ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಎಲ್ ಜಿ ಪಾಲಿಮರ್ಸ್ ನ 9 ಸದಸ್ಯರ ತಜ್ಞರ ತಂಡ ಅನಿಲ ಸೋರಿಕೆಯನ್ನು ತಡೆಯುವ ಕಾರ್ಯದಲ್ಲಿ ನಿರತರಾಗಿದ್ದು , ಅವರಿಗೆ 9 ಸದಸ್ಯರ ತಜ್ಞರ ತಂಡ ಸೇರಿಕೊಂಡಿದೆ.
ಅನಿಲ ಸೋರಿಕೆಗೆ ಕಾರಣವೇನು?: ಕಳೆದ ಗುರುವಾರ ಇದ್ದಕ್ಕಿದ್ದಂತೆ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿದ್ದು ಹೇಗೆ ಎಂದು ವಿಶ್ಲೇಷಿಸಿದ ತಂಡ ಸ್ಟೈರೀನ್ ಸಂಗ್ರಹಿಸುವ ಟ್ಯಾಂಕ್ ನಲ್ಲಿ ತಾಪಮಾನದಿಂದಾಗಿ ಸೋರಿಕೆಯಾಗಿದೆ ಎಂದು ಹೇಳಿದೆ. ಸ್ಟೈರೀನ್ ದ್ರವ್ಯ ರೂಪದಲ್ಲಿದ್ದು ಅದನ್ನು 20 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ ಅದು ಕಳೆದ ಗುರುವಾರ 180 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿ ಟ್ಯಾಂಕ್ ಒಡೆದು ಸೋರಿಕೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಆವಿಯಾಗುವ ಸ್ಟೈರೀನ್ ನಂತರ ಸುರಕ್ಷತಾ ಕವಾಟದ ಮೂಲಕ ಹಾದುಹೋಗಿದೆ.ನಿನ್ನೆ ಸ್ಟೈರೀನ್ ತಾಪಮಾನವನ್ನು 120 ಡಿಗ್ರಿಗೆ ತರಲಾಯಿತು. ತಾಪಮಾನ 100 ಡಿಗ್ರಿಗಿಂತ ಕಡಿಮೆಯಾದರೆ ಮಾತ್ರ ಸ್ಟೈರೀನ್ ಸಂಗ್ರಹಿಸಿಡುವ ಟ್ಯಾಂಕ್ ಸುರಕ್ಷಿತ ಎಂದು ಹೇಳಲಾಗುತ್ತದೆ.
ಆದರೆ ಸದ್ಯ ತಾಪಮಾನವನ್ನು ಇಳಿಸುವುದು ಕಷ್ಟ ಎನ್ನುತ್ತಾರೆ ತಜ್ಞರು.ಟ್ಯಾಂಕ್ ನಿಂದ ದ್ರವ್ಯವನ್ನು ಹೊರತೆಗೆಯಲು ಸಾಧ್ಯವಾಗದಿರುವುದರಿಂದ ಸ್ಟೈರೀನ್ ನ್ನು ಪಾಲಿಮರೀಕರಣಗೊಳಿಸಿ ಎಂಬಿಎಂನ್ನು ವೇಗವರ್ಧಕವಾಗಿ ಸೇರಿಸಲಾಗುತ್ತದೆ. ಇಲ್ಲಿಯವರೆಗೆ 18 ಸಾವಿರ ಟನ್ ನಷ್ಟು ಸ್ಟೈರೀನ್ ನಲ್ಲಿ ಶೇಕಡಾ 50ನ್ನು ಪಾಲಿಮರೀಕರಣಗೊಳಿಸಲಾಗಿದೆ.
ಸದ್ಯ ಕಾರ್ಖಾನೆ ಸುತ್ತಮುತ್ತ ಗ್ರಾಮಗಳ ಮೇಲೆ ಪೊಲೀಸರು, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ತಂಡ ಕಣ್ಗಾವಲಿರಿಸಿದ್ದು ತಮ್ಮ ಪ್ರಾಣ ಪಣಕ್ಕಿಟ್ಟು ಜನರ ರಕ್ಷಣೆಗಾಗಿ ನಿಂತಿರುವ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
Advertisement