ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೊರೋನಾ ವೈರಸ್ ಲಾಕ್ ಡೌನ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ನ ಮೂರನೇ ಹಂತದ ಘೋಷಣೆಗಳ ವಿವರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡುತ್ತಿದ್ದು, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ನ ಮೂರನೇ ಹಂತದ ಘೋಷಣೆಗಳ ವಿವರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡುತ್ತಿದ್ದು, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, 'ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಕೃಷಿಗೆ ಸಂಬಂಧಿಸಿದಂತೆ ಇಂದು 11 ಘೋಷಣೆಗಳನ್ನು ಮಾಡಲಾಗುತ್ತಿದ್ದು,  ಕಳೆದ ಎರಡು ತಿಂಗಳಲ್ಲಿ ಫಸಲ್ ಬಿಮಾ ಯೋಜನೆ ಅಡಿ ರೈತರಿಗೆ 6400 ಕೋಟಿ ರೂಪಾಯಿ ನೀಡಿದ್ದೇವೆ. ಕಳೆದ ಎರಡು ತಿಂಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರಿಗೆ 18,700 ಕೋಟಿ ಹಣ ವರ್ಗಾವಣೆ ಮಾಡಿದ್ದೇವೆ. ಕಳೆದ ಎರಡು ತಿಂಗಳಲ್ಲಿ ರೈತರಿಗೆ ಕನಿಷ್ಟ ಬೆಂಬಲ  ಬೆಲೆ ನೀಡಿ ಉತ್ಪನ್ನ ಖರೀದಿ ಮಾಡಿದ್ದೇವೆ. ಇದಕ್ಕಾಗಿ 74,300 ಕೋಟಿ ರೂಪಾಯಿ ಹಣಕಾಸಿನ ನೆರವು ನೀಡಲಾಗಿದೆ ಎಂದು ಹೇಳಿದರು.

ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ ಮೀಸಲು
ಇದೇ ವೇಳೆ ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ ಮೀಸಲಿಡುವುದಾಗಿ ಹೇಳಿದ ನಿರ್ಮಲಾ ಸೀತಾರಾಮನ್ ಅವರು, ಈ ಪೈಕಿ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ ರೂಪಾಯಿ ಮೀಸಲು. ಕ್ಲಸ್ಟರ್ ಅಧಾರಿತ ಕೃಷಿಗೆ 10  ಸಾವಿರ ಕೋಟಿ ರೂಪಾಯಿ ಮತ್ತು ಆಯುರ್ವೇದ ಉತ್ಪನ್ನಗಳ ಸಾಗಾಟಕ್ಕೂ ಹಣ ಮೀಸಲಿಡಲಾಗಿದೆ ಎಂದು ಹೇಳಿದರು. ಇದಲ್ಲದೆ ಎಲ್ಲಾ ದೇಶೀಯ ಆಹಾರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದ ಅವರು, ಸಾವಯವ ಕೃಷಿ, ಹರ್ಬಲ್ ಕೃಷಿಕರಿಗೆ  ನೆರವು ನೀಡುತ್ತೇವೆ. ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ. ಕರ್ನಾಟಕದ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್ ಆಗಿದ್ದು, ಇದೇ ರೀತಿಯಲ್ಲಿ ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡುತ್ತೇವೆ. ಬ್ರ್ಯಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ  ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ಕೃಷಿ ಮಾರುಕಟ್ಟೆಗಳಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ನಿರ್ಧಾರ. ಎಪಿಎಂಸಿ ಯಲ್ಲೇ ಮಾರಾಟ ಮಾಡಬೇಕೆಂಬ ನಿಯಮವಿಲ್ಲ. ರೈತರಿಗೆ ತಮಗಿಷ್ಟವಾದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎಪಿಎಂಸಿಯಲ್ಲಿ ಪರವಾನಗಿ ಹೊಂದಿರುವ ರೈತರಿಗೆ ಮಾತ್ರ  ಅವಕಾಶ. ಇದರಿಂದ ಬೇಕಾಬಿಟ್ಟಿ ಖರೀದಿ ಮಾಡುವವರಿಗೆ ಕಡಿವಾಣ ಹಾಕಲಾಗುತ್ತದೆ. ಕೃಷಿ ಉತ್ಪನ್ನಗಳ ಅಂತಾರಾಜ್ಯ ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡಿದ್ದು, ತಮಗೆ ಇಷ್ಟ ಬಂದ ಕಡೆ ರೈತರು ಉತ್ಪನ್ನ ಮಾರಬಹುದು. ಇ-ಟ್ರೇಡಿಂಗ್ ಮೂಲಕ ಕೃಷಿ  ಉತ್ಪನ್ನಗಳ ಮಾರಾಟ ಮಾಡಬಹುದು. ರೈತರು ಸಗಟು ಬೆಲೆಗೆ ಮಾರಾಟ ಮಾಡಲು ಕಾನೂನಿನ ಸ್ವರೂಪ ನೀಡಲಾಗುವುದು ಎಂದು ಹೇಳಿದರು.

ಹಾಲು ಉತ್ಪಾದಕರಿಗೆ ನೆರವು
ಕೊರೋನಾ ವೈರಸ್ ಲಾಕ್ ಡೌನ್ ಅವಧಿಯಲ್ಲಿ ಹಾಲಿಗೆ ಬೇಡಿಕೆ ಶೇ 20–25ರಷ್ಟು ಕಡಿಮೆಯಾಗಿದೆ. ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ ಶೇ 2ರಷ್ಟು ಪಾವತಿ ಮಾಡುವ ಹೊಸ ಯೋಜನೆ. 2020–21 ಹಣಕಾಸು ವರ್ಷಕ್ಕೆ ಅನ್ವಯವಾಗುತ್ತದೆ. ಇದರಿಂದಾಗಿ 2 ಕೋಟಿ ರೈತರಿಗೆ ಉಪಯೋಗವಾಗಲಿದ್ದು, 5,000 ಕೋಟಿ ರೂ ಹೆಚ್ಚುವರಿ ನಗದು ಹೊರಬರಲಿದೆ. ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ 15,000 ಕೋಟಿ ರೂ ಮೀಸಲಿಟ್ಟಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಗಾಗಿ ರೂ74,300 ಕೋಟಿಗಳು  ಮೀಸಲಿಡಲಾಗಿದೆ. ಅಲ್ಲದೆ ಪಿಎಂ ಕಿಸಾನ್‌ ನಿಧಿಯಿಂದ 18,700 ಕೋಟಿ ರೂ ವರ್ಗಾಯಿಸಲಾಗಿದೆ. ಸ್ಥಳೀಯ ತಯಾರಿಕೆಗಳನ್ನು ಪ್ರಚುರ ಪಡಿಸುವುದು ಹಾಗೂ ಜಗತ್ತಿನಾದ್ಯಂತ ತಲುಪಿಸುವ ನಿಟ್ಟಿನಲ್ಲಿ ಕಿರು ಆಹಾರ ಉದ್ಯಮಗಳ ಉನ್ನತಿಗಾಗಿ ರೂ 10,000 ಕೋಟಿ ಮೀಸಲಿಡಲಾಗಿದೆ  ಎಂದು ಹೇಳಿದರು. ಎಲ್ಲಾ ಪಶುಗಳಿಗೆ ಶೇ.100 ರೋಗ ನಿರೋಧಕ ಲಸಿಕೆ. ಈಗಾಗಲೇ 1.5 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 53 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಲಸಿಕೆಗಾಗಿ 13,343 ಕೋಟಿ ಮೀಸಲಿಡಲಾಗಿದೆ. ಡೈರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15  ಸಾವಿರ ಕೋಟಿ ರೂಪಾಯಿ. ಪಶುಸಂಗೋಪನೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು. ಮಿಲ್ಕ್ ಪೌಡರ್, ಚೀಸ್, ಕ್ರೀಮ್ ಉತ್ಪನ್ನಗಳ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಮೀನುಗಾರಿಕೆ ಉತ್ತೇಜನಕ್ಕೆ ಕ್ರಮ
ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದ್ದು, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ 20 ಸಾವಿರ ಕೋಟಿ ರೂಪಾಯಿ ನೆರವು ಮೀಸಲಿಡಲಾಗಿದೆ. ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಸಾಲ ನೀಡಲಾಗುವುದು.  ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಸಾಲ ನೀಡಲಾಗುವುದು.

ಸಣ್ಣ ಆಹಾರ ಉದ್ಯಮಕ್ಕೆ 10 ಸಾವಿರ ಕೋಟಿ ನೆರವು
ಆರೋಗ್ಯ, ಪೌಷ್ಟಿಕಾಂಶ, ಹರ್ಬಲ್‌ ಹಾಗೂ ಸಾವಯವ ಉತ್ಪನ್ನಗಳು ಯೋಜನೆಯಡಿಗೆ ಬರಲಿವೆ. 2 ಲಕ್ಷ ಕಿರು ಆಹಾರ ಉದ್ಯಮಗಳಿಗೆ ಇದರಿಂದ ಅನುಕೂಲವಾಗಲಿದೆ. ಸಮುದಾಯ ಆಧಾರಿತ ಈ ವ್ಯವಸ್ಥೆಯಲ್ಲಿ ಬ್ರ್ಯಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಉದ್ದೇಶ ಒಳಗೊಂಡಿದೆ. ಸ್ಥಳೀಯವಾಗಿ ಉತ್ಪಾದಿಸಿದ ಆಹಾರ ಪದಾರ್ಥಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರ ಪಡಿಸಲು ಈ ನಿಧಿಯನ್ನು ಬಳಿಸಿಕೊಳ್ಳಲಾಗುತ್ತದೆ. ಮಹಿಳಾ ಉದ್ಯೋಗಿಗಳು ಹಾಗೂ ಮಾಲೀಕರನ್ನು ಕೇಂದ್ರೀಕರಿಸಲಾಗುತ್ತದೆ. ಇನ್ನು ಔಷಧಿ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ. ಗಿಡಮೂಲಿಕೆ ಉಳುಮೆ ಮಾಡಲು ನೆರವು ನೀಡಲಾಗುವುದು. ಜೇನು ಸಾಕಣೆಗಾಗಿ 500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ 2 ಲಕ್ಷ ಜೇನು ಕೃಷಿಕರಿಗೆ ಅನುಕೂಲವಾಗಲಿದೆ. ಇದರಿಂದ ಗ್ರಾಮೀಣ ಮಹಿಳೆಯರಿಗೂ ಉದ್ಯೋಗ ಸೃಷ್ಟಿಯಾಗಲಿದೆ. ಜೇನಿನಿಂದ ಉತ್ಪಾದನೆಯಾಗುವ ಮೇಣ ರಫ್ತು ಕಡಿತಕ್ಕೆ ಯತ್ನಿಸಲಾಗುತ್ತದೆ ಎಂದು ಹೇಳಿದರು.

ಇನ್ನು ಟೊಮ್ಯಾಟೊ, ಈರುಳ್ಳಿ, ಆಲೂಗೆಡ್ಡೆ ಬೆಳೆ ಸಾಗಣೆ ಮತ್ತು ಸಂಸ್ಕರಣೆಗೆ 500 ಕೋಟಿ ರೂಪಾಯಿ ಮತ್ತು ಸಾಗಾಟಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ ಮಾಡಲಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ  ನೀಡಲು ಪ್ರಯತ್ನಿಸಲಾಗುವುದು. ಎಣ್ಣೆ, ಬೇಳೆ, ಆಲೂಗೆಡ್ಡೆ, ಈರುಳ್ಳಿ ಸಂಗ್ರಹ ನಿರ್ಬಂಧ ರದ್ದು ಮಾಡಲಾಗುವುದು. ರಾಷ್ಟ್ರೀಯ ವಿಪತ್ತು, ದರ ಕುಸಿತ ವೇಳೆ ಮಾತ್ರ ನಿರ್ಬಂಧ ರದ್ದು. ಉಳಿದ ದಿನಗಳಲ್ಲಿ ಸಂಗ್ರಹಣೆಗೆ ಇರುವ ನಿರ್ಬಂಧ ಮುಂದುವರಿಯುವುದು. ಅಗತ್ಯವಸ್ತುಗಳನ್ನು  ಸಂಗ್ರಹಿಸಲು ಸದ್ಯಕ್ಕೆ ಯಾವುದೇ ಮಿತಿ ಇಲ್ಲ ಎಂದು ಹೇಳಿದರು. 

ಮೂರನೇ ಕಂತಿನ ಪ್ಯಾಕೇಜ್ ವಿವರಗಳು:
ಕೃಷಿ ಸಂಬಂಧಿತ ವಲಯಗಳ ಪ್ಯಾಕೇಜ್ ಪ್ರಕಟಣೆ. 
ಮತ್ಸ್ಯ, ಪಶು ಸಂವರ್ಧನೆ, ಡೈರಿ, ಆಹಾರ ಸಂಸ್ಕರಣೆಗೆ ಉತ್ತೇಜನ.
ಮೂರನೇ ಕಂತಿನ ಪ್ಯಾಕೇಜ್‌ನಲ್ಲಿ 11 ಅಂಶಗಳಗಳಿಗೆ ಅದ್ಯತೆ.
ಕೃಷಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿ ಸ್ಥಾಪನೆ.
ಶೈತ್ಯಾಗಾರಗಳ ನಿರ್ಮಾಣ ಮತ್ತು ಧಾನ್ಯಗಳ ಗೋದಾಮುಗಳ ನಿರ್ಮಾಣ.
ಲಾಕ್‌ಡೌನ್‌ ಅವಧಿಯಲ್ಲಿ ರೈತರ ಖಾತೆಗಳಲ್ಲಿ 18,700 ಕೋಟಿ ಜಮೆ. 
74,300 ಕೋಟಿ ರೂ. ಮೌಲ್ಯದ ಕೃಷಿ ಉತ್ಪನ್ನಗಳು ರೈತರಿಂದ ಖರೀದಿ. ಹೈನುಗಾರಿಕೆ ನಡೆಸುವ ರೈತರಿಗೆ 5000 ಕೋಟಿ ಹೆಚ್ಚುವರಿ ನೆರವು. 2 ಕೋಟಿ ಹೈನುಗಾರಿಕೆ ರೈತರಿಗೆ ಪ್ರಯೋಜನ. 
30 ಸಾವಿರ ಕೋಟಿ ರೂಪಾಯಿ ರೈತರಿಗೆ ತುರ್ತು ಸಹಾಯ ನಿಧಿ. 
ಸಹಾಯ ನಿಧಿಯಿಂದ 3 ಕೋಟಿ ರೈತರಿಗೆ ಲಾಭ. 
ಆಕ್ವಾ ರೈತರ ರಫ್ತುಗಾಗಿ ವಿಶೇಷ ಕಾರ್ಯಾಚರಣೆ.
ದೇಶೀಯ ಉತ್ಪನ್ನಗಳ ರಫ್ತಿಗಾಗಿ 10,000 ಕೋಟಿ ರೂ ನಿಧಿ ಸ್ಥಾಪನೆ. 
ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ನೆರವಾಗಲು 10 ಸಾವಿರ ಕೋಟಿ ನಿಧಿ.
ಎರಡು ಲಕ್ಷ ಆಹಾರ ಸಂಸ್ಕರಣಾ ಘಟಕಗಳಿಗೆ ಲಾಭ.
ಮತ್ಸ್ಯ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ 20,000 ಕೋಟಿ ರೂ ನಿಧಿ. 
ಸಾಗರ ಉತ್ಪನ್ನಗಳ ರಫ್ತಿಗೆ ಉತ್ತೇಜನ 55 ಲಕ್ಷ ಉದ್ಯೋಗಗಳು.
ಆಕ್ವಾ ಕಲ್ಚರ್ ಗೆ 11,000 ಕೋಟಿ ರೂ ನಿಧಿ.
ಪ್ರಧಾನ ಮಂತ್ರಿ ಮೀನುಗಾರಿಕೆ ಯೋಜನೆಯಡಿ 20,000 ಕೋಟಿ ರೂ ನಿಧಿ.
ಮೀನುಗಾರರಿಗೆ ವಿಮಾ ಸೌಲಭ್ಯ.
ಪಶುಸಂವರ್ಧನೆ ಮೂಲಸೌಕರ್ಯಕ್ಕಾಗಿ 15,000 ಕೋಟಿ ನಿಧಿ. 
ಜಾನುವಾರು ಮತ್ತು ಪಶುಗಳಿಗೆ ಲಸಿಕೆ ನೀಡಲು 13,300 ಕೋಟಿ ರೂ.
53 ಕೋಟಿ ಪಶುಗಳಿಗೆ ಶೇ 100ರಷ್ಟು ಲಸಿಕೆ.
ಔಷಧೀಯ ಸಸ್ಯಗಳ ಕೃಷಿಗೆ 4000 ಕೋಟಿ ರೂ.
ಜೇನುಸಾಕಣೆದಾರರಿಗೆ 5000 ಕೋಟಿ ರೂ.
ಬೆಲೆ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳ ಕಾನೂನಿನಲ್ಲಿ ಬದಲಾವಣೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com