ಪ್ರಧಾನಿ ಮೋದಿಯನ್ನು ಹೊಗಳಿದ ಆನಂದ್ ಶರ್ಮಾ: ಅಂತರ ಕಾಯ್ದುಕೊಂಡ ಕಾಂಗ್ರೆಸ್
ನವದೆಹಲಿ: ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಕ್ಕೆ ಮೆಚ್ಚುಗೆ ಸೂಚಿಸಿ ಹೊಗಳಿದ್ದ ಆನಂದ್ ಶರ್ಮಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ.
ಒಂದೆಡೆ ಕಾಂಗ್ರೆಸ್ ನಾಯಕ, ವಕ್ತಾರ ರಣ್ದೀಪ್ ಸುರ್ಜೆವಾಲ ಪ್ರಧಾನಿ ನಡೆಯಲ್ಲಿ ಟೀಕಿಸಿದ್ದರೆ, ಅದೇ ಪಕ್ಷದ ಮತ್ತೋರ್ವ ನಾಯಕರಾಗಿರುವ ಆನಂದ್ ಶರ್ಮಾ ಪ್ರಧಾನಿ ನಡೆಗೆ ಮೆಚ್ಚುಗೆ ಸೂಚಿಸಿ ಹೊಗಳಿದ್ದರು.
ಆನಂದ್ ಶರ್ಮಾ ರಾಜ್ಯಸಭೆಯಲ್ಲಿ ವಿಪಕ್ಷದ ಉಪನಾಯಕರಾಗಿದ್ದು, ಪಕ್ಷದ ಸುಧಾರಣೆಗಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದ 23 ಮಂದಿ ಪೈಕಿ ಇವರೂ ಒಬ್ಬರಾಗಿದ್ದಾರೆ. ಮೋದಿ ಹೊಗಳಿಕೆ ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಮೋದಿ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆನಂದ್ ಶರ್ಮಾ, ಪ್ರಧಾನಿಯ ನಡೆಯನ್ನು ಸ್ವಾಗತಿಸಿದ್ದು, ಪ್ರಧಾನಿ ಮೋದಿ ಅವರ ನಡೆ ಭಾರತೀಯ ವಿಜ್ಞಾನಿಗಳಿಗೆ ಹಾಗೂ ಅವರ ಶ್ರಮವನ್ನು ಗುರುತಿಸುವಂಥದ್ದಾಗಿದೆ ಎಂದು ಆನಂದ್ ಶರ್ಮಾ ಹೇಳಿದ್ದರು.
ಇದೊಂದೇ ನಡೆ ಕೊರೋನಾ ಎದುರಿಸಲು ಮುಂಚೂಣಿಯಲ್ಲಿರುವವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ ಎಂದು ಆನಂದ್ ಶರ್ಮಾ ಮೋದಿಯನ್ನು ಹೊಗಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ