ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋವಿಡ್-19: 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದ ಸೋಂಕಿತರು ಗುಣಮುಖ, ಸಾವಿನ ಪ್ರಮಾಣ 1.73ಕ್ಕೆ ಕುಸಿತ

ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಅಲ್ಪ ಪ್ರಮಾಣದ ಮುನ್ನಡೆ ದೊರೆತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಅಲ್ಪ ಪ್ರಮಾಣದ ಮುನ್ನಡೆ ದೊರೆತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಿನ್ನೆ ರಾತ್ರಿ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಅತೀ ಹೆಚ್ಚಿನ ಪ್ರಮಾಣದ ಅಂದರೆ 70,072 ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ದೇಶದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟಾರೆ  ಸೋಂಕಿತರ ಸಂಖ್ಯೆ 31,07,223ಕ್ಕೆ ಏರಿಕೆಯಾಗುವಂತೆ ಮಾಡಿದೆ. ಈ ಅಂಕಿಸಂಖ್ಯೆ ಭಾರತದ ಚೇತರಿಕೆ ಪ್ರಮಾಣ ಏರಿಕೆಯಾಗುವಂತೆ ಮಾಡಿದ್ದು, ಪ್ರಸ್ತುತ ದೇಶದಲ್ಲಿ ಚೇತರಿಕ ಪ್ರಮಾಣ 77.23ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟಾರೆ ಗುಣಮುಖರ ಪೈಕಿ ಸೋಂಕಿತರು ಹೆಚ್ಚಾಗಿರುವ 5 ರಾಜ್ಯಗಳಲ್ಲಿ ನಿನ್ನೆ ಗರಿಷ್ಟ  ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಗುಣಮುಖರಾದ 70,072 ಸೋಂಕಿತರ ಪೈಕಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಈ ಐದು ರಾಜ್ಯಗಳ ಪಾಲೇ ಶೇ.60ರಷ್ಟಿದೆ. ಮಹಾರಾಷ್ಟ್ರದಲ್ಲಿ ಗರಿಷ್ಟ ಶೇ21 ರಷ್ಟು ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ, ತಮಿಳುನಾಡು (ಶೇ.12.63),  ಆಂಧ್ರಪ್ರದೇಶ (ಶೇ.11.91), ಕರ್ನಾಟಕ (ಶೇ.8.82) ಮತ್ತು ಉತ್ತರ ಪ್ರದೇಶದಲ್ಲಿ ಶೇ. 6.14ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಇದೇ ವೇಳೆ ದೇಶದಲ್ಲಿ ಕೊರೋನಾ ಸೋಂಕಿನಿಂದ ಸಾಯುತ್ತಿರುವವರ ಪ್ರಮಾಣದಲ್ಲಿ ಕೂಡ ಅಲ್ಪ ಇಳಿಕೆ ಕಂಡುಬಂದಿದ್ದು, ಪ್ರಸ್ತುತ ದೇಶದಲ್ಲಿ ಕೊವಿಡ್-19 ಸಾವಿನ ಪ್ರಮಾಣ  1.73ಕ್ಕೆ ಕುಸಿದಿದೆ. 

ಫಲ ನೀಡುತ್ತಿರುವ (TTT-test, track and treat) ಪರೀಕ್ಷೆ, ಟ್ರ್ಯಾಕ್ ಮತ್ತು ಚಿಕಿತ್ಸೆ ನೀತಿ
ಇನ್ನು ದೇಶದಲ್ಲಿ ಕೊರೋನಾ ವೈರಸ್ ತಕ್ಕಮಟ್ಟಿಗೆ ಹತೋಟಿಗೆ ಬರಲು ಕೇಂದ್ರ ಆರೋಗ್ಯ ಇಲಾಖೆಯ ಪರೀಕ್ಷೆ, ಟ್ರ್ಯಾಕ್ ಮತ್ತು ಚಿಕಿತ್ಸೆ ನೀತಿ ನೆರವಾಗುತ್ತಿದೆ ಎಂದು ಹೇಳಲಾಗಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಸೋಂಕು ದೃಢಪಟ್ಟವರನ್ನು ಗುರುತಿಸಿ, ಅವರ ಪ್ರಾಥಮಿಕ ಮತ್ತು  ದ್ವಿತೀಯ ಸಂಪರ್ಕಿತರನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ನೀಡಿದರೆ ಸೋಂಕನ್ನು ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದರಿಂದ ಸೋಂಕಿತರು ಬೇಗ ಗುಣಮುಖವಾಗುವಂತೆ ಮಾಡಬಹುದು. ಹೀಗಾಗಿ ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು  ಪತ್ತೆ ಮಾಡಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಬೇಕಿದೆ. ಚೇತರಿಕೆ ಪ್ರಮಾಣ ಹೆಚ್ಚಾಗಲು ಇದು ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಶುಕ್ರವಾರ ಒಂದೇ ದಿನ ದೇಶಾದ್ಯಂತ 10,59,346 ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆ ಮೂಲಕ ದೇಶದಲ್ಲಿ ಒಟ್ಟಾರೆ ಕೋವಿಡ್ ಪರೀಕ್ಷೆಗಳ ಸಂಖ್ಯೆ 4,77,38,491ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕಣರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರಸ್ತುತ  ದೇಶದಲ್ಲಿ 8,46,395 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com