ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖ: ಕೃಷಿ ಮಸೂದೆ ಕುರಿತು ಮನ್ ಕಿ ಬಾತ್ ನಲ್ಲಿ ಮೋದಿ ಸಮರ್ಥನೆ

ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯ ಸರ್ಕಾರ ನೀಡಿದೆ ಎಂದು ಹೇಳುವ ಮೂಲಕ ಕೃಷಿ ಮಸೂದೆಯನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿಬಾತ್ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ-ಮನ್ ಕಿ ಬಾತ್
ಪ್ರಧಾನಿ ಮೋದಿ-ಮನ್ ಕಿ ಬಾತ್
Updated on

ನವದೆಹಲಿ: ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯ ಸರ್ಕಾರ ನೀಡಿದೆ ಎಂದು ಹೇಳುವ ಮೂಲಕ ಕೃಷಿ ಮಸೂದೆಯನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿಬಾತ್ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 69ನೇ ಮಾಸಿಕ ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ಕಾರ್ಯಕ್ರಮದಲ್ಲಿ ರೈತರ ಕುರಿತು ಮಾತನಾಡಿದ ಪ್ರಧಾನಿ ಮೋದಿ,  ಕೃಷಿ ಮಸೂದೆಯ ಲಾಭಗಳನ್ನು ಉಲ್ಲೇಖಿಸಿದರು.  ನೂತನ ಮಸೂದೆ ದೇಶದ ಕೃಷಿ ವಲಯದ ಚಹರೆ ಬದಲಿಸಲಿದೆ. ಕೃಷಿ ವಿಧೇಯಕಗಳು ರೈತರ ಪರವಾಗಿದ್ದು, ಇವುಗಳ ಲಾಭವನ್ನು ದೇಶದ ರೈತ ಸಮುದಾಯ ಅರಿಯಬೇಕಿದೆ.  ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯದ ಬಗ್ಗೆ ಮೋದಿ ರೈತರಿಗೆ ಸಂದೇಶ ನೀಡಿದರು. 'ಆತ್ಮನಿರ್ಭರ  ಭಾರತ ನಿರ್ಮಾಣದ ಪ್ರಯತ್ನಗಳಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಇಷ್ಟಬಂದ ಜಾಗದಲ್ಲಿ, ಇಷ್ಟಬಂದ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಪಡೆದಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಕೃಷಿ ಕ್ಷೇತ್ರಕ್ಕೆ ಅಪಾರ ಲಾಭವಾಗಲಿದೆ.  ಕೆಲ ವರ್ಷಗಳ ಹಿಂದೆ ಹಲವು ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯಿಂದ ತರಕಾರಿ, ಹಣ್ಣುಗಳನ್ನು ಹೊರಗಿಡಲಾಯಿತು. ಇದರಿಂದ ರೈತರು ಲಾಭ ಗಳಿಸಿದರು. ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಕೃಷಿ ಕ್ಷೇತ್ರದ ಸಾಮರ್ಥ್ಯ ಪ್ರದರ್ಶನ ಮಾಡಿತ್ತು ಎಂದು ಮೋದಿ ಹೇಳಿದರು. 

ಇದೇ ವೇಳೆ ಗಾಂಧಿ ತತ್ವದ ಕುರಿತು ಮಾತನಾಡಿದ ಪ್ರಧಾನಿ ಮೋದಿ, 'ನಾವು ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸದ್ದಿದ್ದರೆ, ಇಂದು ‘ಆತ್ಮನಿರ್ಭರ ಭಾರತ್’ ಅಭಿಯಾನ ಅಗತ್ಯವಿರಲಿಲ್ಲ. ಭಾರತ ಎಂದೋ ಸ್ವಾವಲಂಬಿಯಾಗುತ್ತಿತ್ತು ಎಂದು ಮೋದಿ ಹೇಳಿದರು.

ಕತೆ ನಿರೂಪಣೆ ಮಹತ್ವ ಸಾರಿದ ಪ್ರಧಾನಿ ಮೋದಿ
ಕತೆ ನಿರೂಪಣೆಯು ಶತಮಾನಗಳಿಂದ ನಮ್ಮ ರಾಷ್ಟ್ರದ ಒಂದು ಭಾಗವಾಗಿದೆ. ಅದು ನಾಗರಿಕತೆಯಷ್ಟೇ ಹಳೆಯದು. ಇತ್ತೀಚಿನ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಥೆಗಳು ಜನಪ್ರಿಯತೆ ಗಳಿಸುತ್ತಿವೆ. ಅನೇಕರು ಕಥೆ ಹೇಳುವಿಕೆಯನ್ನು ದೇಶದಾದ್ಯಂತ ಜನಪ್ರಿಯಗೊಳಿಸುತ್ತಿದ್ದಾರೆ ಮತ್ತು ಭಾರತವು ಕಥೆ ಹೇಳುವ ಅದ್ಭುತ ಸಂಪ್ರದಾಯವನ್ನು ಹೊಂದಿದೆ. ಭಾರತದಲ್ಲಿ ಮಕ್ಕಳಿಗೆ ಕಥೆ ಹೇಳುವ ಶ್ರೀಮಂತ ಸಂಪ್ರದಾಯ ಶತಮಾನಗಳಿಂದ ಬೇರೂರಿದ್ದು, ಈ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಲೇ ಇದೆ. ಕಥೆಗಳು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಮಕ್ಕಳ ಜ್ಞಾನ ವಿಕಸನಕ್ಕಾಗಿ ಹಿರಿಯರು ಕಥೆಗಳನ್ನು ಹೇಳುತ್ತಿರಬೇಕು. ಎಲ್ಲಾ ಕುಟುಂಬಗಳು, ತಮ್ಮ ನಡುವೆ ಕತೆ ಹೇಳಲು ಸ್ವಲ್ಪ ಸಮಯವನ್ನು ಮೀಸಲಿಡುವಂತೆ ವಿನಂತಿಸಿದ ಮೋದಿ, ಅದು ಅದ್ಭುತ ಅನುಭವ ನೀಡಲಿದೆ ಎಂದು ಹೇಳಿದರು. ಇದೇ ವೇಳೆ ಅವರು ಬೆಂಗಳೂರಿನ ಕತೆ ನಿರೂಪಣಾ ವೆಬ್‌ಸೈಟ್‌ Gaathastory.in ಅನ್ನು ಉಲ್ಲೇಖಿಸಿದರು. ಅದರ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು ಎಂದು ತಿಳಿಸಿದರು. 

ಭಗತ್ ಸಿಂಗ್ ನೆನೆದ ಪ್ರಧಾನಿ
ಇನ್ನು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಹೀದ್ ಭಗತ್ ಸಿಂಗ್ ಅವರನ್ನು ನೆನೆದರು. ನಾಳೆ(ಸೋಮವಾರ) ಭಗತ್ ಸಿಂಗ್ ಅವರ 113ನೇ ಜನ್ಮ ಜಯಂತಿ ಇದ್ದು, ಈ ವೇಳೆ ಸಮಸ್ತ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರನನ್ನು ಸ್ಮರಿಸಲಿದೆ ಎಂದು ಹೇಳಿದರು. ಕೊರೊನಾ ಕಾಲದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ಮೋದಿ ಈ ವೇಳೆ ದೇಶವಾಸಿಗಳಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com